ಮಹಾರಾಜರ ಕಾರಿಗೆ ಬಿ.ಟಿ.ಎಸ್. ಬಸ್ ಡಿಕ್ಕಿ
ಬೆಂಗಳೂರು, ಆ. 28– ಶ್ರೀಮನ್ ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರು ಪ್ರಯಾಣ ಮಾಡುತ್ತಿದ್ದ ಮೋಟಾರ್ ಕಾರಿಗೂ ಮತ್ತು ಬಿ.ಟಿ.ಎಸ್. ಬಸ್ಸಿಗೂ ಇಂದು ಸಂಜೆ ಕೆ.ಆರ್. ಸರ್ಕಲ್ ಬಳಿ ಲಘು ಡಿಕ್ಕಿ ಆಯಿತು. ಯಾರಿಗೂ ಗಾಯಗಳೇನು ಆಗಲಿಲ್ಲ. ಕಾರಿನ ‘ಮಡ್ಗಾರ್ಡ್‘ಗೆ ಮಾತ್ರ ಸ್ವಲ್ಪ ಪೆಟ್ಟಾಗಿದೆ. ಮಹಾರಾಜರು ಆನಂತರ ಇನ್ನೊಂದು ಕಾರಿನಲ್ಲಿ ನಗರದಲ್ಲಿರುವ ತಮ್ಮ ಅರಮನೆಗೆ ತೆರಳಿದರು.
ತುಟ್ಟಿಭತ್ಯದ ಬಾಕಿ ‘ಹಣದ ರೂಪದಲ್ಲಿ ನೀಡಲು ಸಾಧ್ಯವಿಲ್ಲ’
ನವದೆಹಲಿ, ಆ. 28– ಕೇಂದ್ರ ಸರ್ಕಾರದ ನೌಕರರ ತುಟ್ಟಿಭತ್ಯದ ಪ್ರಶ್ನೆಯ ಬಗ್ಗೆ ಇಂದು ಉಪಪ್ರಧಾನ ಮಂತ್ರಿ ಶ್ರೀ ಮುರಾರಜಿ ದೇಸಾಯಿ ಮತ್ತು ನೌಕರರ ಪ್ರತಿನಿಧಿಗಳ ನಡುವೆ ಸುಮಾರು ಎರಡು ಗಂಟೆಗಳ ಕಾಲ ಅಪೂರ್ಣ ಚರ್ಚೆ ನಡೆಯಿತು.
ಹೆಚ್ಚುವರಿ ತುಟ್ಟಿಭತ್ಯದ ಬಾಕಿಯನ್ನು (ಫೆಬ್ರುವರಿ 1 ರಿಂದ ಆಗಸ್ಟ್ವರೆಗೆ) 1968ರ ಮಾರ್ಚ್ ತನಕ ನಗದು ರೂಪದಲ್ಲಿ ಕೊಡುವುದಕ್ಕೆ ಆಗುವುದೇ ಇಲ್ಲವೆಂದು ಶ್ರೀ ದೇಸಾಯಿಯವರು ಇಂದು ಪುನಃ ಸ್ಪಷ್ಟವಾಗಿ ಹೇಳಿದರು.
ಕಸ ಗುಡಿಸಿದ ಸಚಿವ
ನವದೆಹಲಿ, ಆ. 28– ಹರಿಜನರ ಕಾಲೊನಿಯಲ್ಲಿರುವ ಎರಡಂತಸ್ತಿನ ಮನೆಯ ಮೆಟ್ಟಿಲುಗಳ ಮೇಲಿದ್ದ ಕಸವನ್ನು ಕೇಂದ್ರ ಆರೋಗ್ಯ ಸಚಿವ ಶ್ರೀ ಎಸ್. ಚಂದ್ರಶೇಖರ್ ಅವರೇ ಇಂದು ಬೆಳಿಗ್ಗೆ ಸ್ವತಃ ಗುಡಿಸಿ ಹಾಕಿದರು.
ಮೆಟ್ಟಿಲುಗಳನ್ನು ಶುಚಿಯಾಗಿಡಲು ದೆಹಲಿ ಪುರಸಭೆಯ ಅಧಿಕಾರಗಳು ಏನೂ ವ್ಯವಸ್ಥೆ ಮಾಡಿಲ್ಲ ಎನ್ನುವುದು ಅಲ್ಲಿಯ ನಿವಾಸಿಗಳು ಸಚಿವರಿಗೆ ಕೊಟ್ಟ ದೂರು. ಅವರ ಉತ್ತರ ಸಚಿವರಿಗೆ ಹಿಡಿಸಲಿಲ್ಲ. ನಿವಾಸಿಗಳು ತಾವೇ ಏಕೆ ಗುಡಿಸಬಾರದು ಎನ್ನಿಸಿತು. ಪೊರಕೆಯನ್ನು ತರಿಸಿ ಶ್ರೀ ಚಂದ್ರಶೇಖರ್ ಅವರು ತಾವೇ ಗುಡಿಸಲು ಪ್ರಾರಂಭಿಸಿದರು.
ಹರಿಜನರ ಕಾಲೊನಿಗೆ ಸೌಲಭ್ಯಗಳನ್ನು ಕಲ್ಪಿಸುವಂತೆ ಸಚಿವರು ಪುರಸಭೆಯ ಅಧ್ಯಕ್ಷರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.