ಗೋವೆ, ದೀವ್ ಮತ್ತು ದಮನ್ಗಳಲ್ಲಿ ಗೋಮಾಂತಕ ಪಕ್ಷ ಮತ್ತೆ ಅಧಿಕಾರಕ್ಕೆ
ಪಣಜಿ, ಮಾ. 31– ಗೋವೆ, ಡಿಯು ಮತ್ತು ದಾಮನ್ಗಳಲ್ಲಿ ನಡೆದ ಎರಡನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ದಯಾನಂದ ಬಾಂದೋಡ್ಕರ್ ಅವರ ನಾಯಕತ್ವದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು ಮತ್ತೆ ಸರ್ಕಾರ ರಚಿಸಲು ಚುನಾಯಿತವಾಗಿದೆ.
30 ಮಂದಿ ಸದಸ್ಯರ ವಿಧಾನಸಭೆಯಲ್ಲಿ ಈ ಪಕ್ಷವು 16 ಸ್ಥಾನಗಳನ್ನು ಗಳಿಸಿ ಸ್ಪಷ್ಟ ಬಹುಮತ ಪಡೆದಿದೆ.
**
ಆಕಾಶವಾಣಿಯಲ್ಲಿ ಶೀಘ್ರವೇ ವಾಣಿಜ್ಯ ಜಾಹಿರಾತುಗಳು
ನವದೆಹಲಿ, ಮಾ. 31– ಬೇಸಿಗೆ ಕಳೆಯುವ ಮೊದಲು ವಾಣಿಜ್ಯ ಜಾಹಿರಾತುಗಳು ಆಕಾಶವಾಣಿ ಮತ್ತು ಟೆಲಿವಿಜನ್ಗಳಲ್ಲಿ ಪ್ರಕಟವಾಗಲು ಆರಂಭವಾಗುವುವೆಂದು ಕೇಂದ್ರ ವಾರ್ತಾ ಮತ್ತು ಆಕಾಶವಾಣಿ ಸಚಿವ ಶ್ರೀ ಕೆ.ಕೆ. ಷಾ ಇಂದು ನುಡಿದರು.
ಜಾಹಿರಾತಿನ ದರಗಳ ಬಗ್ಗೆ ಜಾಹಿರಾತುದಾರರ ಜೊತೆ ಚರ್ಚೆ ನಡೆದಿದ್ದು ಕೆಲ ತಿಂಗಳಲ್ಲೇ ಈ ಜಾಹಿರಾತು ಯೋಜನೆ ಕಾರ್ಯರೂಪಕ್ಕೆ ಬರುವುದು ಎಂದು ಅವರು ತಿಳಿಸಿದರು.
ಸಮಾಜ ಸೇವೆಯ ಸಬಲ ಸಾಧನೆಗಳಾಗಿ ಆಕಾಶವಾಣಿ ಹಾಗೂ ಟೆಲಿವಿಜನ್ಗಳ ಪರಿವರ್ತನೆ ಸಾಧ್ಯವಾಗುವಂತೆ ಮಾಡಲು ಅವುಗಳಿಗೆ ಬೇಕಾಗುವ ಜನಬಲವು ಈ ಜಾಹಿರಾತು ಪ್ರಕಟನೆಯ ನೀತಿಯಿಂದ ಒದಗುವುದೆಂದು ಅವರೆಂದರು.
**
ಸಣ್ಣ ಕಾರು ಉತ್ಪಾದನೆ: ಮೈಸೂರು ಮುಖ್ಯಮಂತ್ರಿ ಸಲಹೆ ಪರಿಶೀಲನೆ
ನವದೆಹಲಿ, ಮಾ. 31– ಮೈಸೂರು ರಾಜ್ಯದಲ್ಲಿ ಸಣ್ಣ ಕಾರು ತಯಾರಿಕೆ ಯೋಜನೆ ಬಗ್ಗೆ ಸರ್ವಶ್ರೀ ಶ್ರೀ ಲಕ್ಕಪ್ಪ ಮತ್ತು ರಾಜಶೇಖರನ್ ಅವರು ಕೇಳಿದ ಪ್ರಶ್ನೆಗಳಿಗೆ ಇಂದು ಲೋಕಸಭೆಯಲ್ಲಿ ಕೈಗಾರಿಕಾಭಿವೃದ್ಧಿ ಸಚಿವ ಫಕ್ರುದ್ದೀನ್ ಆಲಿ ಅಹಮದ್ ಅವರು ಹೇಳಿಕೆಯೊಂದನ್ನು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.