* ಕೃಷ್ಣಾ ಅಚ್ಚುಕಟ್ಟು ವಿವಾದ: ರಾಜ್ಯದಿಂದ ಕೇಂದ್ರಕ್ಕೆ ಗಡುವು
ಬೆಂಗಳೂರು, ಜುಲೈ 21– ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಅಂತರರಾಜ್ಯ ವಿವಾದವನ್ನು ಅಕ್ಟೋಬರ್ ಒಳಗಾಗಿ ಬಗೆಹರಿಸುವಂತೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಈ ವಿಚಾರವನ್ನು ಬಹಿರಂಗಪಡಿಸಿದ ಸಚಿವರು, ‘ಅಕ್ಟೋಬರ್ ಒಳಗೆ ವಿವಾದವನ್ನು ಬಗೆಹರಿಸದಿದ್ದರೆ ‘ಅಂತರರಾಜ್ಯ ನದಿ ವಿವಾದ ಕಾಯ್ದೆ’ಯಡಿ ವಿವಾದ ಪರಿಹರಿಸುವಂತೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದೂ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ’ ಎಂದರು.
* ಪಶ್ಚಿಮ ಏಷ್ಯಾ ನೀತಿ ಬಗ್ಗೆ ಯಾವುದೇ ಗೊಂದಲ ಇಲ್ಲ: ಪ್ರಧಾನಿ
ನವದೆಹಲಿ, ಜುಲೈ 21– ಸರ್ಕಾರದ ಪಶ್ಚಿಮ ಏಷ್ಯಾ ನೀತಿ ಕುರಿತಂತೆ ಪಕ್ಷದ ಮುಖಂಡರೊಳಗಾಗಲೀ, ಸಂಪುಟದ ಸಚಿವರಲ್ಲಾಗಲೀ ಯಾವುದೇ ಗೊಂದಲ, ಅಸಮಾಧಾನಗಳಿಲ್ಲ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪಕ್ಷದೊಳಗೆ ಮತ್ತು ಸಂಪುಟದಲ್ಲಿ ಅಸಮಾಧಾನ ಸೃಷ್ಟಿಯಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರವಾದವು ಎಂದು ಅವರು ಹೇಳಿದರು.
* ಕೇರಳ ವಿಧಾನಸಭೆಯಲ್ಲಿ ಕೋಲಾಹಲ
ತಿರುವನಂತಪುರಂ, ಜುಲೈ 21– ಕೇರಳ ವಿಧಾನಸಭೆಯಲ್ಲಿ ಇಂದು ಹಿಂದೆಂದೂ ಕಾಣಿಸದ ರೀತಿಯ ಕೋಲಾಹಲ ಸೃಷ್ಟಿಯಾಗಿತ್ತು. ಆಳುವ ಪಕ್ಷ ಹಾಗೂ ವಿರೋಧಪಕ್ಷದ ಮುಖಂಡರು ಏರು ಧ್ವನಿಯಲ್ಲಿ ಪರಸ್ಪರರ ಮೇಲೆ ವಾಗ್ದಾಳಿ ನಡೆಸಿದರು.
ಈ ನಡುವೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದವರೂ ಕೆಂಪು ಬಾವುಟಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗಿದ್ದರಿಂದ ಸುಮಾರು 20 ನಿಮಿಷಗಳ ಕಾಲ ಗೊಂದಲ ಸೃಷ್ಟಿಯಾಗಿ ಕಲಾಪ ಆಹುತಿಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.