ಕೇಂದ್ರದ ಆಡಳಿತಕ್ಕೆ ಮಣಿಪುರ: ರಾಷ್ಟ್ರಪತಿ ಆಜ್ಞೆ
ನವದೆಹಲಿ, ಅ. 25– ಮಣಿಪುರ ಆಡಳಿತವನ್ನು ಕೇಂದ್ರ ಸರಕಾರ ವಹಿಸಿಕೊಂಡಿದೆ. ಆಡಳಿತ ವಹಿಸಿಕೊಳ್ಳುವ ಮತ್ತು ವಿಧಾನ ಸಭೆಯನ್ನು ತಾತ್ಕಾಲಿಕವಾಗಿ ರದ್ಧುಪಡಿಸುವ ಆಜ್ಞೆಗೆ ರಾಷ್ಟ್ರಪತಿಯವರು ಇಂದು ಸಹಿ ಹಾಕಿದರು. ಈ ಆಜ್ಞೆಯನ್ನು ಇದಕ್ಕೆ ಮುನ್ನ ಕೇಂದ್ರ ಸಂಪುಟ ಅನುಮೋದಿಸಿತು.
ಈ ಆಜ್ಞೆಯ ಪ್ರಕಾರ ಮಣಿಪುರ ವಿಧಾನ ಸಭೆ ಮತ್ತು ಮಂತ್ರಿಮಂಡಲ 6 ತಿಂಗಳವರೆಗೆ ರದ್ದಾಗಿರುತ್ತದೆ. ಯಾವುದಾದರೊಂದು ರಾಜಕೀಯ ಪಕ್ಷವು ಸುಭದ್ರ ಸರ್ಕಾರವನ್ನು ರಚಿಸಲು ಸಮರ್ಥವಾದರೆ ಹಾಗೂ ಸರ್ಕಾರದ ಸುಲಲಿತ ಕಾರ್ಯ ನಿರ್ವಹಣೆಯ ಬಗ್ಗೆ ಖಚಿತಪಡಿಸಿದರೆ ಈ ಆಜ್ಞೆಯನ್ನು ಪುನರ್ವಿಮರ್ಶಿಸಿ ರದ್ದು ಮಾಡುವ ಸಾಧ್ಯತೆ ಇದೆ.
ವಿಧಾನಸಭೆಯ ಅಧ್ಯಕ್ಷರ ರಾಜೀನಾಮೆಯ ಪರಿಣಾಮವಾಗಿ ಮಣಿಪುರದಲ್ಲಿ ಉಂಟಾದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕೇಂದ್ರ ಸಂಪುಟವು ಪರಿಶೀಲಿಸಿತು.
ವಿಧಾನಸಭೆಯ ಅಧ್ಯಕ್ಷ ಶ್ರೀ ಸಲಾಂ ಟೊಂಬಿ ಸಿಂಗ್ ಅವರು ನಿನ್ನೆ ರಾಜಿನಾಮೆ ನೀಡಿದಾಗ, ಅಧಿಕಾರಾರೂಢ ಸಂಯುಕ್ತರಂಗ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಹೊಸ ಚುನಾವಣೆಗಳಿಗೆ ತಮ್ಮ ಅಭ್ಯರ್ಥಿಗಳನ್ನು ಸೂಚಿಸಲು ನಿರಾಕರಿಸಿದ್ದರಿಂದ ಮುಖ್ಯ ಕಮಿಷನರು ಸಭೆಯನ್ನು ಮುಂದೂಡಿದ್ದರು.
**
ನವಂಬರ್ 5 ರಂದು ಕಲಾವಿದರಿಗೆ ಸರ್ಕಾರದ ಗೌರವ
ಬೆಂಗಳೂರು, ಅ. 25– ಸಾಹಿತ್ಯ ಮತ್ತು ಕಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಕೆಳಕಂಡ ಕಲಾವಿದರನ್ನು ಸರ್ಕಾರದ ನವಂಬರ್ 5 ರಂದು ಮೈಸೂರಿನಲ್ಲಿ ಗೌರವಿಸಲಿದೆ.
ಸಂಗೀತ: ವೀಣೆ ದೊರೆಸ್ವಾಮಿ ಅಯ್ಯಂಗಾರ್, ಸಾಹಿತ್ಯ: ಶ್ರೀ ಶಿವರಾಮ ಕಾರಂತ, ಭಾರತ ವಾಚನ: ಬಿಂದೂರಾವ್ (ಚಿತ್ರದುರ್ಗ), ಅಭಿನಯ: ಶ್ರೀಮತಿ ಬಿ. ಜಯಮ್ಮ, ನೃತ್ಯ: ಶ್ರೀನಿವಾಸ ಕುಲಕರ್ಣಿ, ಚಿತ್ರಕಲೆ: ರುಮಾಲೆ ಚನ್ನಬಸವಯ್ಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.