ಕೃಷಿ, ಕೈಗಾರಿಕೆ ಉತ್ಪನ್ನ ಕುಸಿತ ಬೆಲೆ ಏರಿಕೆಗೆ ಕಾರಣ– ಇಂದಿರಾ
ಹೈದರಾಬಾದ್, ಆ. 4– ಬೆಲೆಗಳ ಏರಿಕೆಗೆ ವ್ಯವಸಾಯ ಮತ್ತು ಕೈಗಾರಿಕೆ ಉತ್ಪಾದನೆಗಳ ಕುಸಿತವೇ ಮುಖ್ಯ ಕಾರಣವೆಂದೂ, ರಕ್ಷಣಾ ವೆಚ್ಚ ಮತ್ತೊಂದು ಕಾರಣವೆಂದೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಇಂದು ವಿವರಿಸಿದರು.
ರಾಷ್ಟ್ರಕ್ಕೆ ಈಗ ತೊಡಗಿರುವ ಆರ್ಥಿಕ ಮುಗ್ಗಟ್ಟಿನ ಪೂರ್ಣ ಅರ್ಥ ಸಾಮಾನ್ಯ ಜನರಿಗೆ ಆಗುವುದು ಸುಲಭವಲ್ಲವೆಂದು ಹೇಳಿದ ಪ್ರಧಾನಿ, ಬೆಲೆಗಳು ಏರುತ್ತಿದೆಯೆಂಬುದು ಎಲ್ಲರಿಗೂ ಅರ್ಥವಾಗಿರುವ ಅಂಶ ಎಂದರು.
ಆಂಧ್ರ ರಾಜ್ಯಕ್ಕೆ ಅವರು ನೀಡಿರುವ 24 ಗಂಟೆಗಳ ಭೇಟಿಯ ದಟ್ಟಣೆಯ ಕಾರ್ಯಕ್ರಮದಲ್ಲಿ ಒಂದಾಗಿ, ಪ್ರಧಾನ ಮಂತ್ರಿಗಳು ಇಂದು ಇಲ್ಲಿ ಐದನೆಯ ಎಚ್.ಎಂ.ಟಿ. ಕಾರ್ಖಾನೆಯನ್ನು ಉದ್ಘಾಟಿಸಿದರು. ಒಂದು ವೇಳೆ ಜಲಾಭಾವ ಉಂಟಾಗದೆ ಇದ್ದಿದ್ದರೆ, ರಕ್ಷಣಾ ವೆಚ್ಚ ಆಧಿಕ್ಯದ ಎದುರಿನಲ್ಲೂ ಸಹ ಬೆಲೆಗಳು ಈಗಿನ ಮಟ್ಟಕ್ಕೆ ಏರುತ್ತಿರಲಿಲ್ಲವೆಂದು ಅವರು ಹೇಳಿದರು.
**
ಭಾಗ್ಯದಲಕ್ಷ್ಮಿಗೆ ಭೂಕಂಪದ ಪರಾಕ್
ಬೊಗೋಟ (ಕೊಲಂಬಿಯ), ಆ. 4– ಕೊಲಂಬಿಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪಗಳಿಂದ ಉತ್ತರ ಕೊಲಂಬಿಯದ ರೈತರಿಗೆ ಭಾಗ್ಯಲಕ್ಷ್ಮಿಯ ದರ್ಶನವಾಗಿದೆ. ರಾಜಧಾನಿಗೆ 75 ಮೈಲಿಗಳ ದೂರದಲ್ಲಿರುವ ಚಿಚಾಕ ಬೆಟ್ಟದ ಒಂದು ಭಾಗ ಭೂಕಂಪದಿಂದ ಬಿರಿದ ಫಲವಾಗಿ ಅದರ ನಡುವೆ ರತ್ನಗಳ ನಿಧಿಯೊಂದು ಕಾಣಿಸಿತು, ಬಡರೈತರಿಗೆ ಅತಿಯಾದ ಹಿಗ್ಗು.
**
ನಾಗಾರ್ಜುನ ಸಾಗರ ಅಣೆಕಟ್ಟೆ ಉದ್ಘಾಟನೆ
ವಿಜಯಪುರ, ಆ. 4– ‘ರಾಷ್ಟ್ರದ ಮಾನವೀಯತೆಯ ದೇಗುಲ’ ಎಂದು ತಮ್ಮ ತಂದೆ ದಿವಂಗತ ಜವಾಹರಲಾಲ್ ನೆಹರೂರವರು ಶ್ಲಾಘಿಸಿದ್ದ ನಾಗಾರ್ಜುನ ಸಾಗರದ ಅಣೆಕಟ್ಟಿನ ಉದ್ಘಾಟನೆಯನ್ನು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ನೆರವೇರಿಸಿದರು.
ವಿಶ್ವದಲ್ಲೇ ಅತ್ಯಂತ ಎತ್ತರದ ಹಾಗೂ ದೊಡ್ಡದಾದ ಕಲ್ಲಿನ ಅಣೆಕಟ್ಟೆಯ ಇಕ್ಕೆಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಸಮಾರಂಭಗಳಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರು ಗುಂಡಿಗಳನ್ನು ಒತ್ತುತ್ತಿದ್ದಂತೆ ಈ ‘ಹೊಸದೇಗುಲ’ದಿಂದ ಎರಡು ನಾಲೆಗಳಿಗೆ ನೀರು ಭೋರ್ಗರೆಯುತ್ತಾ ಹರಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.