ADVERTISEMENT

ಶನಿವಾರ, 6–5– 1967

​ಪ್ರಜಾವಾಣಿ ವಾರ್ತೆ
Published 5 ಮೇ 2017, 19:30 IST
Last Updated 5 ಮೇ 2017, 19:30 IST

ಪಂಜಾಬ್ ಕಾಂಗ್ರೆಸ್ ಶಾಸಕನ ಮೇಲೆ ಹಲ್ಲೆ
ಚಂಡಿಘರ್, ಮೇ 5–
ಆಡಳಿತ ಪಕ್ಷವಾದ ಸಂಯುಕ್ತ ರಂಗವನ್ನು ಇತ್ತೀಚೆಗೆ ತ್ಯಜಿಸಿ, ಕಾಂಗ್ರೆಸ್ ಪಕ್ಷವನ್ನು ಸೇರಿದ ಪಂಜಾಬಿನ ವಿಧಾನಸಭಾ ಸದಸ್ಯ ಬಲದೇವ್ ಸಿಂಗ್‌ರವರು ಇಂದು ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ವಿಧಾನ ಭವನವನ್ನು ಪ್ರವೇಶಿಸುತ್ತಿದ್ದಾಗ ಸುಮಾರು 2,000 ಜನರ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿತು.

ವಿಧಾನಸಭೆಯ ಕಾಂಗ್ರೆಸ್ ಸದಸ್ಯರಾದ ಪ್ರಬೋಧಚಂದ್ರ ಮತ್ತು ಪಿ.ಎಸ್. ಆಜಾದರೊಡನೆ ಕಾರಿನಲ್ಲಿ ಬಂದ  ಬಲದೇವ್‌ ಸಿಂಗರು ವಿಧಾನ ಭವನ ಪ್ರವೇಶಿಸಿದ ಕೂಡಲೇ ಜನರ ಗುಂಪು ಅವರನ್ನು ಹೊರಕ್ಕೆಳೆದುಕೊಂಡು ಬಂದು ಭವನದ ಮೆಟ್ಟಿಲುಗಳ ಮೇಲೆ ಥಳಿಸಿತು.

ಬಜೆಟ್ ಅಧಿವೇಶನದ ನಂತರ ಸಂಪುಟದ ಪುನರ್ರಚನೆ: ಎಸ್ಸೆನ್ ಯೋಚನೆ
ಬೆಂಗಳೂರು, ಮೇ 5–
ಜೂನ್ ತಿಂಗಳಿನಲ್ಲಿ ಮತ್ತೆ ಆರಂಭವಾಗುವ ವಿಧಾನ ಮಂಡಲದ ಬಜೆಟ್ ಅಧಿವೇಶನ  ಮುಗಿದ ನಂತರ ಮಂತ್ರಿ ಮಂಡಲವನ್ನು ಪುನರ್ ರಚಿಸುವ ಆಲೋಚನೆ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರಿಗಿದೆಯೆಂದು ತಿಳಿದುಬಂದಿದೆ. 3 ಅಥವಾ 4 ಮಂದಿ ಹಿರಿಯ ಸಚಿವರಿಗೆ ಕಾಂಗ್ರೆಸ್ ಸಂಸ್ಥೆಯನ್ನು ಬಲಪಡಿಸುವ ಕಾರ್ಯವನ್ನು ವಹಿಸಲು ಯೋಚಿಸುತ್ತಿದ್ದಾರೆಂದು ಗೊತ್ತಾಗಿದೆ. ಕೆಲವರಿಗೆ ಸಂಸ್ಥೆಯ ಕಾರ್ಯವನ್ನು ವಹಿಸುವ ತಮ್ಮ ಆಲೋಚನೆಯನ್ನು ಸಂಜೆ ನಡೆದ ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಗೆ ಮುಖ್ಯಮಂತ್ರಿಗಳು ತಿಳಿಸಿದರೆಂದು ಗೊತ್ತಾಗಿದೆ.

ಕಾಂಗ್ರೆಸ್ ಸಂಸ್ಥೆ ರಚನೆಯ ಮಾರ್ಪಾಡು ಅಗತ್ಯ: ಕಾರ್ಯ ಸಮಿತಿಯಲ್ಲಿ ಚರ್ಚೆ
ಬೆಂಗಳೂರು, ಮೇ 5–
ಕಾಂಗ್ರೆಸ್ ಸಂಸ್ಥೆಯಲ್ಲಿ 2  ಅಂಗಗಳಿರುವುದಕ್ಕೆ  ಬದಲಾಗಿ ಸಂಸ್ಥೆ ಇಂಗ್ಲೆಂಡಿನ ರಾಜಕೀಯ ಪಕ್ಷಗಳ ಮಾದರಿಯಲ್ಲಿ ಪುನರ್‌ರೂಪಗೊಂಡು ಕೆಲಸ ಮಾಡಬೇಕೆಂದು ಇಂದು ನಡೆದ ಪ್ರದೇಶ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರು ಅಭಿಪ್ರಾಯಪಟ್ಟರು.

2 ಅಂಗಗಳಿರುವುದರಿಂದ ಚಟುವಟಿಕೆಗಳನ್ನು ನಡೆಸುವುದರಲ್ಲಿ ಗೊಂದಲಕ್ಕೆ ಕಾರಣವಾಗಿದೆಯೆಂದೂ ರಾಜಕೀಯ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟವಾಗಿರಬೇಕಾದ ಕಾರಣ ಸಂಸ್ಥೆಯ ರಚನೆಯನ್ನೇ ಬದಲಾಯಿಸಬೇಕಾದ ಅಗತ್ಯವಿದೆಯೆಂದೂ ಸದಸ್ಯರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.