ಅಸ್ಸಾಂ ಮಾತುಕತೆ ವಿಫಲ: ‘ಪಟಾಸ್ಕರ್ ಸೂತ್ರ’ ಜಾರಿಗೆ ಕಾಂಗ್ರೆಸ್ ಪಟ್ಟು
ನವದೆಹಲಿ, ಜುಲೈ 9– ಅಸ್ಸಾಂ ಮರು ರೂಪಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಸಮ್ಮೇಳನ ನಿರೀಕ್ಷಿತ ಫಲ ನೀಡದೆ ವಿಫಲಗೊಂಡಿದೆ.
ಹಿಲ್ ಲೀಡರ್ಸ್ ಕಾನ್ಫರೆನ್ಸ್ನ ಪ್ರತಿನಿಧಿಗಳು ಸಮ್ಮೇಳನವನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದರಿಂದಾಗಿ 11 ಸದಸ್ಯರ ಉಪಸಮಿತಿಗೆ ಮುಖಭಂಗವಾದಂತಾಗಿದೆ.
‘ಇಂದು ನಡೆದ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಉಪಸಮಿತಿಯ ಅಧ್ಯಕ್ಷರೂ ಆಗಿರುವ ಯೋಜನಾ ಸಚಿವ ಶ್ರೀ ಅಶೋಕ್ ಮೆಹ್ತಾ ತಿಳಿಸಿದರು.
ಇಂದು ಸುಮಾರು ಎರಡು ಗಂಟೆಗಳ ಕಾಲ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ ಮುಖಂಡರು ಪಟಾಸ್ಕರ್ ಆಯೋಗದ ಸಲಹೆಗಳನ್ನು ಜಾರಿ ಮಾಡಲೇಬೇಕು ಎಂಬ ನಿಲುವಿಗೆ ಅಂಟಿಕೊಂಡಿದ್ದರು.
ನಕ್ಸಲ್ಬರಿಯಲ್ಲಿ ತುರ್ತು ಕ್ರಮಕ್ಕೆ ಪ್ರಧಾನಿ ಒತ್ತಾಯ
ನವದೆಹಲಿ, ಜುಲೈ 9– ಪಶ್ಚಿಮ ಬಂಗಾಳದ ಉಪಮುಖ್ಯಮಂತ್ರಿ ಶ್ರೀ ಜ್ಯೋತಿ ಬಸು ಅವರು ಇಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿ ನಕ್ಸಲ್ಬರಿಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.
ತುರ್ತು ಕ್ರಮಗಳನ್ನು ಕೈಗೊಂಡು ನಕ್ಸಲ್ಬರಿಯ ದಂಗೆಯನ್ನು ಶೀಘ್ರ ನಿಯಂತ್ರಣಕ್ಕೆ ತರಬೇಕು, ಇಲ್ಲದಿದ್ದರೆ ಬಂಡುಕೋರರಿಗೆ ಲಾಭವಾಗುವ ಸಾಧ್ಯತೆ ಇದೆ ಎಂದು ಪ್ರಧಾನಿ ಹೇಳಿರುವುದಾಗಿ ತಿಳಿದುಬಂದಿದೆ.
ನೆರೆ: ಸತ್ತವರ ಸಂಖ್ಯೆ 144ಕ್ಕೆ
ಟೋಕಿಯೊ, ಜುಲೈ 9– ಜಪಾನ್ನಲ್ಲಿ ಉಂಟಾದ ನೆರೆಯಿಂದಾಗಿ ಸತ್ತವರ ಸಂಖ್ಯೆ 144ಕ್ಕೆ ಏರಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.