ಗಡಿ ವಿವಾದ ಚಳವಳಿ ಬೇಡ
ಸಾಂಗ್ಲಿ, ಡಿ. 10– ಮೈಸೂರು ರಾಜ್ಯದೊಡನೆ ಗಡಿ ವಿವಾದದ ಬಗ್ಗೆ ಚಳವಳಿ ಮಾರ್ಗವನ್ನು ಕೈಬಿಡುವಂತೆ ಸಂಪೂರ್ಣ ಮಹಾರಾಷ್ಟ್ರ ಸಮಿತಿ ನಾಯಕರಿಗೆ ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ಒತ್ತಿ ಹೇಳಿದರು. ಇಂಥ ವಿವಾದಗಳನ್ನು ರಸ್ತೆಗಳಲ್ಲಿ ಬಗೆಹರಿಸುವುದಕ್ಕೆ ಆಗುವು
ದಿಲ್ಲವೆಂದೂ ಅವರು ತಿಳಿಸಿದರು.
ಕಾಂಗ್ರೆಸ್ಸಿಗೆ ಸಮಾನ ಬದಲಿ ಪಕ್ಷ ಬೆಳೆಯುವುದಗತ್ಯ ಎಸ್. ನಿಜಲಿಂಗಪ್ಪ
ನವದೆಹಲಿ, ಡಿ. 10– ಕಾಂಗ್ರೆಸ್ ಪಕ್ಷದೊಳಗೇ ಇರುವ ಎಡ ಮತ್ತು ಬಲಪಂಥಗಳೆರಡೂ ಒಂದಾಗುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ನಿಯೋಜಿತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪ ಇಂದು ಇಲ್ಲಿ ತಿಳಿಸಿದರು.
ಇಷ್ಟು ವರ್ಷಗಳಾದರೂ ಉತ್ತಮ ನೀತಿಯುಳ್ಳ, ದೃಢವಾದ ರಾಜಕೀಯ ಪಕ್ಷವೊಂದು ಬೆಳೆಯದೇ ಇದ್ದರೆ, ಕಾಂಗ್ರೆಸ್ಸೇ ಅದಕ್ಕೆ ಕಾರಣ ಎಂದು ಹೇಳಿದರು.
ಹಿಂದಿಯೊಂದೇ ಸಂಪರ್ಕ ಭಾಷೆ
ವಿಜಯವಾಡ, ಡಿ. 10– ಹಿಂದಿ ಮಾತ್ರ ಭಾರತದ ಸಂಪರ್ಕ ಭಾಷೆಯಾಗಬಲ್ಲದು. ಇಂಗ್ಲೀಷ್, ರಷ್ಯನ್ ಅಥವಾ ಜರ್ಮನ್ ಯಾವುದೇ ವಿದೇಶ ಭಾಷೆ ಸಂಪರ್ಕ ಭಾಷೆಯಾಗುವುದು ಎಂದಿಗೂ ಸಾಧ್ಯವಿಲ್ಲ ಎಂದು ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯಿ ದೃಢವಾಗಿ ಪ್ರತಿಪಾದಿಸಿದರು.
ಇಂಗ್ಲೀಷ್ ಸ್ಥಾನಕ್ಕೆ ಹಿಂದಿ ಬರುವ ತನಕ ಚಳವಳಿ: ಸೇಠ್
ಗೋವಿಂದ ದಾಸ್
ನವದೆಹಲಿ, ಡಿ. 10– ಇಂಗ್ಲೀಷ್ ಭಾಷೆಯನ್ನು ಹಿಂದಿ ಮತ್ತು ಇತರ ಭಾರತೀಯ ಭಾಷೆಗಳಿಂದ ಸ್ಥಳಾಂತರಗೊಳಿಸುವವರೆಗೂ ಹಿಂದಿ ಭಾಷೆ ಮಾತನಾಡುವ ರಾಜ್ಯಗಳಲ್ಲಿ ‘ಇಂಗ್ಲೀಷ್ ವಿರೋಧಿ ಚಳವಳಿ’ ಮುಂದುವರಿಯುವುದೆಂದು ಪಾರ್ಲಿಮೆಂಟ್ ಸದಸ್ಯ ಶ್ರೀ ಸೇಠ್ ಗೋವಿಂದದಾಸ್ ಅವರು ಇಂದು ಹೇಳಿದರು.
ಈಗಿನ ರೂಪದಲ್ಲೇ ಶಾಸನವಾಗಲಿ: ಶ್ರೀ ಕಾಮರಾಜ್
ಬೆಂಗಳೂರು, ಡಿ.10– ಸಂಸತ್ ಮುಂದಿರುವ ಭಾಷಾ ಮಸೂದೆ ಈಗಿರುವ ರೂಪದಲ್ಲೇ ಅಂಗೀಕೃತವಾಗುವುದೆಂದು ತಾವು ಆಶಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಕೆ. ಕಾಮರಾಜ್ ಅವರು ಇಂದು ವರದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.