ADVERTISEMENT

ಸೋಮವಾರ, 11–9–1967

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 19:30 IST
Last Updated 10 ಸೆಪ್ಟೆಂಬರ್ 2017, 19:30 IST

ಮೈಸೂರಿಗೇ ಬೆಳಗಾವಿ

(ಪ್ರಜಾವಾಣಿ ಪ್ರತಿನಿಧಿಯಿಂದ)

ನವದೆಹಲಿ, ಸೆ.10- ಮಹಾರಾಷ್ಟ್ರ ಮತ್ತು ಮೈಸೂರುಗಳ ನಡುವಣ ಗಡಿ ವಿವಾದದಲ್ಲಿ ವ್ಯಾಜ್ಯ ಕಾರಣವಾದ ಬೆಳಗಾವಿ ನಗರವು ಮೈಸೂರು ರಾಜ್ಯದಲ್ಲಿಯೇ ಉಳಿಯಬೇಕೆಂದು ಮಹಾಜನ್ ಆಯೋಗವು ಶಿಫಾರಸು ಮಾಡಿದೆಯೆಂದು ತಿಳಿದುಬಂದಿದೆ.

ADVERTISEMENT

ಉಭಯ ರಾಜ್ಯಗಳ ನಡುವಣ ಗಡಿ ಹೊಂದಾಣಿಕೆಯನ್ನು ಕುರಿತ ಮಹಾಜನ್ ಆಯೋಗದ ವರದಿಯು ಸದ್ಯದಲ್ಲಿಯೇ ಕೇಂದ್ರ ಸಚಿವ ಸಂಪುಟದ ಮುಂದೆ ಪರಿಶೀಲನೆಗೆ ಬರಲಿದೆ. ಈ ವರದಿಯನ್ನು ಕೇಂದ್ರ ಗೃಹಸಚಿವ ಶಾಖೆಗೆ ಸಲ್ಲಿಸಿ ಇನ್ನೂ ಎರಡು ವಾರಗಳೂ ಆಗಿಲ್ಲ.

ಹಿಂದಿ‌ನ ಸಂದರ್ಭಗಳಂತಲ್ಲದೆ, ಈ ಸಾರಿ ವರದಿಯ ಬಗ್ಗೆ ಸಂಪುಟದ ಚರ್ಚೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸುವುದಕ್ಕಾಗಿ ಸಿದ್ಧವಾಗಿರಲು ಅಪೇಕ್ಷಿಸಿರುವ ಕೇಂದ್ರ ಸಚಿವರು, ಅಧ್ಯಯನ ಮಾಡಲು ಆಯೋಗದ ವರದಿಯ  ಪ್ರತಿಗಳನ್ನು ಪಡೆಯಲು ಕಾತರರಾಗಿರುವರೆಂದೂ ತಿಳಿದು ಬಂದಿದೆ.

ದಿನೇಶ್ ಸಿಂಗ್ ವಿದೇಶಾಂಗ ಮಂತ್ರಿ ಆಗುವ ಸಂಭವದೆಹಲಿ, ಸೆ. 10– ಚಾಗಲಾರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಭಾರತ ವಿದೇಶಾಂಗ ಸಚಿವರಾಗಿ ಕೇಂದ್ರ ವಾಣಿಜ್ಯ ಮಂತ್ರಿ ಶ್ರೀ ದಿನೇಶ್‌ಸಿಂಗ್ ಅವರ ಹೆಸರನ್ನು ತೀವ್ರವಾಗಿ ಪರಿಶೀಲಿಸಲಾಗುತ್ತಿದೆಯೆಂದು ಇಲ್ಲಿಅತ್ಯಂತ ನಂಬಲರ್ಹವಾದ ವಲಯಗಳಿಂದ ತಿಳಿದುಬಂದಿದೆ.

ಇಂದು ಆರಂಭವಾಗುವ ಉಪಕುಲಪತಿಗಳ ಸಮ್ಮೇಳನದಲ್ಲಿ ಶಿಕ್ಷಣ ಮಾಧ್ಯಮ ಪ್ರಶ್ನೆ ಇತ್ಯರ್ಥ?

ನವದೆಹಲಿ, ಸೆ. 10– ವಿಶ್ವವಿದ್ಯಾನಿಲಯಗಳ ಶಿಕ್ಷಣ ಮಾಧ್ಯಮದ ಬದಲಾವಣೆಯನ್ನು ಕುರಿತು ಉಂಟಾಗಿರುವ ವಾದ ವಿವಾದದ ಬಗ್ಗೆ ನಾಳೆಯಿಂದ ಮೂರು ದಿನಗಳ ಕಾಲ ಇಲ್ಲಿ ನಡೆಯುವ ಎಲ್ಲ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ಮಹತ್ವದ ಸಮ್ಮೇಳನವು ಅಂತಿಮವಾಗಿ ತನ್ನ ತೀರ್ಪನ್ನು ನೀಡುವ ನಿರೀಕ್ಷೆಯಿದೆ.

ಶಿಕ್ಷಣ ಸಚಿವರು ಅಧ್ಯಕ್ಷತೆ ವಹಿಸುವ ಈ ಸಮ್ಮೇಳನವನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಉದ್ಘಾಟಿಸುವರು.

ಗೊಮ್ಮಟಗಿರಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಮಸ್ತಕಾಭಿಷೇಕ

ಮೈಸೂರು, ಸೆ. 10– ಇಲ್ಲಿಂದ 14 ಮೈಲಿ ದೂರದಲ್ಲಿರುವ ಗೊಮ್ಮಟಗಿರಿ ಕ್ಷೇತ್ರದಲ್ಲಿ 18ನೇ ಮಸ್ತಕಾಭಿಷೇಕವು ಇಂದು ವಿಜೃಂಭಣೆಯಿಂದ ನೆರವೇರಿತು.

ಏಕಶಿಲೆಯಲ್ಲಿ ನಿರ್ಮಿಸಲಾಗಿರುವ 18 ಅಡಿ ಎತ್ತರದ ಬಾಹುಬಲಿ ಸ್ವಾಮಿಯ ಮೂರ್ತಿಗೆ ಇಂದು ಮಧ್ಯಾಹ್ನ ಒಂದು ಗಂಟೆ ಕಾಲ ನಡೆದ ಮಸ್ತಕಾಭಿಷೇಕವನ್ನು ಸಹಸ್ರಾರು ಮಂದಿ ಭಕ್ತರು ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.