* ಕಾಂಗ್ರೆಸ್ ಸೋಲಿಗೆ ಪಕ್ಷದವರೆಲ್ಲಾ ಹೊಣೆ: ಎ.ಐ.ಸಿ.ಸಿ.ಯಲ್ಲಿ ಇಂದಿರಾ ವಿಶ್ಲೇಷಣೆ
ನವದೆಹಲಿ, ಜೂನ್ 25– ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅನುಭವಿಸಿದ ಸೋಲಿಗೆ ಪಕ್ಷದ ಸದಸ್ಯರೆಲ್ಲರೂ ಜವಾಬ್ದಾರರೆಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಎ.ಐ.ಸಿ.ಸಿ. ಸಭೆಯಲ್ಲಿ ಮಾತನಾಡುತ್ತಾ ತಿಳಿಸಿದರು.
ಸಂಸ್ಥೆಯನ್ನು ಕುರಿತ ಅಧಿಕೃತ ನಿರ್ಣಯವನ್ನು ಸಭೆ ಅಂಗೀಕರಿಸಿದ ಬಳಿಕ ಮಾತನಾಡಿದ ಅವರು ರಾಜಕೀಯ ರಂಗದಲ್ಲಿ ‘ಭಾರಿ ಬದಲಾವಣೆ’ಗಳಾದ ನಂತರ ಈ ಸಭೆ ಸೇರಿದೆ ಎಂದರು.
ಸಭೆಯಲ್ಲಿ ಆರಂಭದಿಂದಲೂ ಭಾಷಣಕಾರರು ಮಾಡಿದ ಉಗ್ರ ಟೀಕೆಗಳನ್ನು ಪ್ರಸ್ತಾಪಿಸುತ್ತ ‘ಕೋಪಗೊಳ್ಳುವುದರಲ್ಲಿ ತಪ್ಪೇನಿಲ್ಲ, ಆಧಿಕಾರದಲ್ಲಿರುವವರು ಮಾತ್ರವೇ ಅಲ್ಲ, ಸಾಮಾನ್ಯ ಸದಸ್ಯರೂ ಕೂಡ ಕಾಂಗ್ರೆಸ್ ಪರಾಭವಕ್ಕೆ ಹೊಣೆಗಾರರು’ ಎಂದರು.
‘ಪರಿಸ್ಥಿತಿಯನ್ನು ಎದುರಿಸಲು ನಾವೇನೂ ಮಾಡಿಲ್ಲ. ಅದನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆಯೇ? ಪರಿಸ್ಥಿತಿಯ ಬಗ್ಗೆ ಸದಸ್ಯರಿಗೆ ಹೆಚ್ಚು ಅರಿವು ಮೂಡಿದಲ್ಲಿ ಈ ಸಭೆ ಸ್ವಲ್ಪವಾದರೂ ಸಾಧಿಸಿದಂತಾದೀತು’ ಎಂದರು ಶ್ರೀಮತಿ ಗಾಂಧಿ.
* ಧರ್ಮಛತ್ರ
ನವದೆಹಲಿ, ಜೂ. 25– ಕಾಂಗ್ರೆಸ್ನ ಪ್ರಮುಖ ಸದಸ್ಯರಲ್ಲಿ ಒಬ್ಬರಾದ ಶ್ರೀಮತಿ ತಾರಕೇಶ್ವರಿ ಸಿನ್ಹಾ ಅವರು ಇಂದು ಕಾಂಗ್ರೆಸ್ ಪಕ್ಷವನ್ನು ಧರ್ಮಶಾಲೆಗೆ ಹೋಲಿಸಿದರು.
‘ಈ ಧರ್ಮಶಾಲೆಗೆ ಯಾರು ಬೇಕಾದರೂ ಬರಬಹುದು,‘ಸುಸ್ವಾಗತ, ದಯವಿಟ್ಟು ಒಳಗೆ ಬನ್ನಿ’ ಎಂದು ಪಕ್ಷ ಕರೆಯುತ್ತದೆ’ ಎಂದು ಅವರು ಎ.ಐ.ಸಿ.ಸಿ. ಸಭೆಯಲ್ಲಿ ಮಾತನಾಡುತ್ತಾ ತಿಳಿಸಿದರು.
* ರಾಜಧನ ರದ್ದು: ಜಾರಿಯ ಕ್ರಮ ಪರಿಶೀಲನಾರ್ಹ
ಬೆಂಗಳೂರು, ಜೂ. 25– ಮಾಜಿ ರಾಜರುಗಳಿಗೆ ನೀಡುತ್ತಿರುವ ರಾಜಧನ ಹಾಗೂ ಕೆಲವು ವಿಶೇಷ ಹಕ್ಕುಗಳನ್ನು ರದ್ದು ಮಾಡಬೇಕೆಂಬ ಎ.ಐ.ಸಿ.ಸಿ.ಯ ತೀರ್ಮಾನವನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬುದನ್ನು ಯೋಚಿಸಬೇಕಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ತಿಳಿಸಿದರು.
ದೆಹಲಿಯಲ್ಲಿ ನಡೆದ ಎ.ಐ.ಸಿ.ಸಿ. ಸಭೆಯಲ್ಲಿ ಭಾಗವಹಿಸಿ ಇಂದು ನಗರಕ್ಕೆ ಹಿಂದಿರುಗಿದ ಮುಖ್ಯಮಂತ್ರಿಗಳು ಎ.ಐ.ಸಿ.ಸಿ.ಯ ಈ ತೀರ್ಮಾನ, ಎ.ಐ.ಸಿ.ಸಿ. ಸದಸ್ಯರ ಹಾಗೂ ಬಹುಶಃ ಬಹುಭಾಗ ಸಾರ್ವಜನಿಕರ ಅಭಿಪ್ರಾಯದ ಸೂಚಕ. ಹೇಗೆ ಕಾರ್ಯರೂಪಕ್ಕೆ ತರಬೇಕೆಂಬುದನ್ನು ಪರಿಶೀಲಿಸಬೇಕಾಗಿದೆ ಎಂದರು.
‘ತನ್ನ ನೆಲೆ ಎಲ್ಲಿ ಎಂಬುದನ್ನು ಕಾಂಗ್ರೆಸ್ ತಿಳಿದುಕೊಂಡಿದೆ. ಇರುವ ಕೊರತೆಗಳನ್ನು ನೀಗಿಸಿ ಸಂಸ್ಥೆಯನ್ನು ಬಲಪಡಿಸಬೇಕಾಗಿದೆ. ಅಧಿಕಾರದಲ್ಲಿ ಅಥವಾ ಹೊರಗಡೆ, ಕಾಂಗ್ರೆಸ್ಸನ್ನು ಸೇವೆಯ ಉತ್ತಮ ಸಾಧನವನ್ನಾಗಿ ರೂಪಿಸಬೇಕಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.