ಲೋಕಸಭೆಯಲ್ಲಿ ಕಾಂಗ್ರೆಸ್ಸಿಗೆ ಕೃಶವಾದ ಬಹುಮತ
ನವದೆಹಲಿ, ಫೆ. 26– ಕೇಂದ್ರದಲ್ಲಿ ಸರ್ಕಾರ ರಚಿಸಲು ಬೇಕಾಗುವಷ್ಟು ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ಸು ಬಹಳ ಪ್ರಯಾಸದಿಂದ ಗಳಿಸಿಕೊಂಡಿತು.
520 ಸ್ಥಾನಗಳಲ್ಲಿ ಭಾನುವಾರ ರಾತ್ರಿ 12.30 ಗಂಟೆವರೆಗೆ ಪ್ರಕಟವಾದ 503 ಸ್ಥಾನಗಳಲ್ಲಿ ಕಾಂಗ್ರೆಸ್ಸು 277 ಸ್ಥಾನಗಳನ್ನು ಪಡೆದಿದೆ.
ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗಾದ ಭಾರಿ ಪರಾಭವದಿಂದಾಗಿ, ಲೋಕಸಭೆಯಲ್ಲೂ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುವುದೆಂಬ ನಂಬಿಕೆ ಕಾಂಗ್ರೆಸ್ ನಾಯಕರಲ್ಲೇ ಮಾಯವಾಗುತ್ತಿತ್ತು.
ಲೋಕಸಭೆಗೆ ಪಿ.ಎಸ್.ಪಿ.ಯ ಶ್ರೀ ಲಕ್ಕಪ್ಪ ಆಯ್ಕೆ
ಬೆಂಗಳೂರು, ಫೆ. 26– ಪಿ.ಎಸ್.ಪಿ. ಸ್ಪರ್ಧಿ ಶ್ರೀ ಕೆ. ಲಕ್ಕಪ್ಪ ಅವರು 261 ಮತಗಳಿಂದ ಲೋಕಸಭೆಗೆ ಚುನಾಯಿತರಾಗಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಈ ಫಲಿತಾಂಶವನ್ನು ಭಾನುವಾರ ಬೆಳಗಿನ ಜಾವ ತುಮಕೂರಿನಲ್ಲಿ ಘೋಷಿಸಲಾಯಿತು. ಕಾಂಗ್ರೆಸ್ ಸ್ಪರ್ಧಿಯ ಕೋರಿಕೆಯಂತೆ ತುಮಕೂರು ವಿಧಾನಸಭಾಕ್ಷೇತ್ರದ ಮತಗಳ ಪುನರ್ ಎಣಿಕೆ ನಡೆದ ನಂತರ ಫಲಿತಾಂಶವನ್ನು ಪ್ರಕಟಿಸಲಾಯಿತು.
ವಿಶ್ವಸಂಸ್ಥೆ ಮಾನವ ಹಕ್ಕುಆಯೋಗ: ಉಪಾಧ್ಯಕ್ಷರಾಗಿ ಕೆ.ಸಿ. ಪಂತ್ ಆಯ್ಕೆ
ನವದೆಹಲಿ, ಫೆ. 26– ಪಾರ್ಲಿಮೆಂಟಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿರುವ ಶ್ರೀ ಕೆ.ಸಿ. ಪಂತ್ ಅವರು ವಿಶ್ವಸಂಸ್ಥೆ ಮಾನವೀಯ
ಹಕ್ಕುಗಳ ಆಯೋಗದ ಉಪಾಧ್ಯಕ್ಷರಾಗಿ ಎರಡನೆ ಅವಧಿಗೆ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.