ADVERTISEMENT

50 ವರ್ಷಗಳ ಹಿಂದೆ

ಮಂಗಳವಾರ, 6–12–1966

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 19:30 IST
Last Updated 5 ಡಿಸೆಂಬರ್ 2016, 19:30 IST

ಗೋವೆಯಲ್ಲಿ ಜನವರಿ ಮಧ್ಯ ಭಾಗದಲ್ಲಿ ಅಭಿಪ್ರಾಯ ಸಂಗ್ರಹ
ನವದೆಹಲಿ, ಡಿ. 5–
ತಮ್ಮ ವಿಲೀನದ ಪ್ರಶ್ನೆಯ ಬಗ್ಗೆ ಗೋವೆ, ಡಯು ಮತ್ತು ಡಾಮನ್‌ಗಳಲ್ಲಿ ನಡೆಯಬೇಕಾದ ಜನಾಭಿಪ್ರಾಯ ಸಂಗ್ರಹವು ಮುಂದಿನ ತಿಂಗಳ (1967ರ ಜನವರಿ) ಮಧ್ಯಭಾಗದ ಹೊತ್ತಿಗೆ ನಡೆಯುವುದು.

ಸಾರ್ವಜನಿಕ ಚುನಾವಣೆಗಳಿಗೆ ಒಂದು ತಿಂಗಳ ಮುಂಚೆ ಜನವರಿಯಲ್ಲಿ ಜನಾಭಿಪ್ರಾಯ ಸಂಗ್ರಹವು ನಡೆಯಲೆಂದು ತಾವು ಸರ್ಕಾರಕ್ಕೆ ಬಲವಾಗಿ ಶಿಫಾರಸು ಮಾಡುವುದಾಗಿ ಪ್ರಧಾನ ಚುನಾವಣಾ ಕಮಿಷನರ್‌ ಶ್ರೀ ಕೆ.ವಿ.ಕೆ. ಸುಂದರಂ ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

***
ಐ.ಟಿ.ಐ.ನಲ್ಲಿ ಲಾಕ್‌ಔಟ್‌ ಘೋಷಣೆ: ಕೆಲಸಗಾರರಿಂದ ಮುಷ್ಕರ ಮುಂದುವರಿಕೆ
ಬೆಂಗಳೂರು, ಡಿ. 5–
ಭಾರತ ಟೆಲಿಫೋನ್‌ ಕಾರ್ಖಾನೆಯ ಆಡಳಿತ ವರ್ಗವು ಇಂದು ಬೆಳಿಗ್ಗೆ 11–30 ರಿಂದ ಲಾಕ್‌ಔಟ್‌ ಅನ್ನು ಘೋಷಿಸಿತು. ಶನಿವಾರ ಮಧ್ಯಾಹ್ನದಿಂದ ಸುಮಾರು ಎಂಟು ಸಾವಿರ ಮಂದಿ ಕಾರ್ಖಾನೆಯ ಒಳಗೆ ನಡೆಸುತ್ತಿರುವ ಬೈಠಕ್‌ ಮುಷ್ಕರ ಮುಂದುವರಿದಿದೆ.

***
ರಾಜ್ಯಾದ್ಯಂತ ಮಕ್ಕಳ ಗಣತಿ
ಬೆಂಗಳೂರು, ಡಿ. 5– 
ಕಡ್ಡಾಯ ಪ್ರಾಥಮಿಕ ಶಿಕ್ಷಣ ಯೋಜನೆಯ ಪ್ರಕಾರ ಡಿಸೆಂಬರ್‌ 16 ರಿಂದ 18 ರವರೆಗೆ ರಾಜ್ಯಾದ್ಯಂತ, 5 ವರ್ಷ 10 ತಿಂಗಳುಗಳಿಂದ 10 ವರ್ಷಗಳ ನಡುವಿನ ವಯಸ್ಸಿರುವ ಮಕ್ಕಳ ಗಣತಿಯು ನಡೆಯುವುದು. ಮಕ್ಕಳ ಪಾಲಕರು, ಗಣತಿ ನಡೆಸಲು ಬರುವ ಅಧಿಕಾರಿಗಳಿಗೆ ಸರಿಯಾದ ವಿವರ ತಿಳಿಸಿ ಸಹಕಾರ ನೀಡಬೇಕೆಂದು ಪ್ರಾರ್ಥಿಸಲಾಗಿದೆ.

***
ಗೋಹತ್ಯಾ ನಿಷೇಧ ಕುರಿತ ರಾಜ್ಯಾಂಗದ ಆದೇಶದ ಜಾರಿಗೆ ಕೇಂದ್ರದ ತೀವ್ರ ಕ್ರಮ
ನವದೆಹಲಿ ಡಿ.5–
ಗೋಹತ್ಯಾ ನಿಷೇಧಕ್ಕಾಗಿ ರಾಜ್ಯಾಂಗವು ನೀಡಿರುವ ಆದೇಶವನ್ನು ‘ರಾಜ್ಯಗಳ ಸಹಕಾರದೊಡನೆ’ ಜಾರಿಗೆ ತರಲು ಕೇಂದ್ರ ಸರ್ಕಾರವು ತೀವ್ರವಾದ ಕ್ರಮಗಳನ್ನು ಕೈಗೊಳ್ಳುವುದೆಂದು ಗೃಹ ಸಚಿವ ವೈ.ಬಿ.ಚವಾಣರು ಇಂದು ಪಾರ್ಲಿಮೆಂಟಿನಲ್ಲಿ ತಿಳಿಸಿದರು.

***
ಫೆಬ್ರವರಿ 15 ರಿಂದ ಸಾರ್ವತ್ರಿಕ ಚುನಾವಣೆ: ಲೋಕಸಭೆಯಲ್ಲಿ ವೇಳಾಪಟ್ಟಿಯ ಪ್ರಕಟಣೆ
ನವದೆಹಲಿ, ಡಿ. 5–
ರಾಷ್ಟ್ರಾದ್ಯಂತ ನಾಲ್ಕನೆಯ ಸಾರ್ವತ್ರಿಕ ಚುನಾವಣೆ ಫೆಬ್ರವರಿ 15 ರಿಂದ 21 ರವರೆಗೆ ನಡೆಯುವುದು. ಕೇಂದ್ರ ನ್ಯಾಯಾಂಗ ಸಚಿವ ಶ್ರೀ ಜಿ.ಎಸ್‌. ಪಾಠಕ್‌ ಅವರು ಇದನ್ನು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.