ADVERTISEMENT

ಗುರುವಾರ, 8–2–1968

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 19:30 IST
Last Updated 7 ಫೆಬ್ರುವರಿ 2018, 19:30 IST

ಚರಣ್‌ ಸಿಂಗ್ ಅವರ ರಾಜಿನಾಮೆ ಇಂದು

ಲಖನೌ, ಫೆ. 7– ನಾಳೆ ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸಲು ಮುಖ್ಯಮಂತ್ರಿ ಚರಣ್ ಸಿಂಗ್ ಅವರು ದೃಢ ನಿರ್ಧಾರ ಕೈಗೊಂಡಿರುವುದರಿಂದ ಉತ್ತರಪ್ರದೇಶದ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರದ ಪತನ ಹೆಚ್ಚು ಕಡಿಮೆ ಖಚಿತವೆಂದು ಕಂಡುಬರುತ್ತಿದೆ.

ಉತ್ತರಪ್ರದೇಶದಲ್ಲಿ ಕೇವಲ ಹತ್ತು ತಿಂಗಳ ಹಿಂದೆ ಸಂಯುಕ್ತ ವಿಧಾಯಕ ದಳವು ಸರ್ಕಾರವನ್ನು ರಚಿಸಿತು.

ADVERTISEMENT

ವಿಧಾಯಕ ದಳದ ವಿವಿಧ ಪಕ್ಷಗಳು ಇಂದು ಪ್ರತ್ಯೇಕವಾಗಿ ಸಭೆಗಳನ್ನು ನಡೆಸಿದವಲ್ಲದೆ ದಳದ ನೀತಿ ನಿರ್ಧರಿಸುವ ಸಮನ್ವಯ ಸಮಿತಿಯು ಈಗಿನ ನಾಯಕನ ಸ್ಥಾನದಲ್ಲಿ ಎಲ್ಲ ಪಕ್ಷಗಳಿಗೂ ಒಪ್ಪಿಗೆಯಾಗುವ ವ್ಯಕ್ತಿಯನ್ನು ಹೆಸರಿಸಲು ವಿಫಲಗೊಂಡಿದೆ.

ಪ್ರದೇಶ ಭಾಷೆ ಕಡ್ಡಾಯ ಜೊತೆಗೊಂದು ಭಾಷೆ: ಕು.ವೆಂ.ಪು. ಸೂತ್ರ

ಮೈಸೂರು, ಫೆ. 7– ಪ್ರಾದೇಶಿಕ ಭಾಷೆಯ ಕಲಿಕೆ ಕಡ್ಡಾಯವಾಗಬೇಕು. ಇದರ ಜೊತೆಗೆ ವಿದ್ಯಾರ್ಥಿ ಮತ್ತೊಂದು ಭಾಷೆಯನ್ನು ಕಲಿಯಬೇಕು. ಅದು ಇಂಗ್ಲಿಷ್ ಆಗಿರಬಹುದು. ಹಿಂದಿ ಆಗಿರಬಹುದು ಅಥವಾ ಯಾವುದಾದರೊಂದು ವಿದೇಶಿ ಭಾಷೆ ಆಗಿರಬಹುದು. ಇದು ಭಾರತದ ಭಾಷಾ ಸಮಸ್ಯೆಗೆ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಡಾ. ಕೆ.ವಿ. ಪುಟ್ಟಪ್ಪನವರ ಪರಿಹಾರ ಸೂತ್ರ.

ಪ್ರಸ್ತುತ ಭಾಷಾ ಗೊಂದಲ ಕುರಿತು ‘ಪ್ರಜಾವಾಣಿ’ಗೆ ಇತ್ತ ಸಂದರ್ಶನದಲ್ಲಿ ಡಾ. ಪುಟ್ಟಪ್ಪನವರು, ‘ಭಾಷಾ ಕಲಿಕೆ ಬಗ್ಗೆ ಯಾವಾಗಲೂ ಯಾವ ಬಲಾತ್ಕಾರವೂ ಇರಕೂಡದು. ನಮ್ಮ ವಿದ್ಯಾರ್ಥಿಗಳು ಇಂತಹುದೇ ಭಾಷೆ ಕಲಿಯಬೇಕೆಂಬ ಪ್ರಶ್ನೆ ಕುರಿತ ತೀರ್ಮಾನವನ್ನು ತಂದೆ ತಾಯಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಡಬೇಕು. ಯಾರು ಯಾವ ಭಾಷೆಯನ್ನೂ ಯಾರ ಮೇಲೂ ಹೊರಿಸಬಾರದು’ ಎಂದು ಖಚಿತವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.