‘ಬಿಜೆಪಿಯನ್ನು ಎದುರಿಸಲು ಹಾವು, ಮುಂಗುಸಿ, ನಾಯಿ, ಬೆಕ್ಕು ಒಂದಾಗುತ್ತಿವೆ’ ಎಂದಿದ್ದಾರೆ ಅಮಿತ್ ಶಾ (ಪ್ರ.ವಾ. ಏ.2). ತಕ್ಷಣವೇ ನನಗೆ 40 ವರ್ಷದ ಹಿಂದೆ ಇಂದಿರಾ ಗಾಂಧಿ ಆಡಿದ ಮಾತುಗಳು ನೆನಪಿಗೆ ಬಂದವು. ಇಂದಿರಾ ಗಾಂಧಿ ಅವರು ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳದೆ ಸರ್ವಾಧಿಕಾರಿಯಾಗಿ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಅದರ ಕೆಟ್ಟ ಪರಿಣಾಮಗಳೆಲ್ಲ ಇತಿಹಾಸ ಸೇರಿವೆ. ಆಗ ಲೋಕನಾಯಕ ಜೆ.ಪಿ. ಅಂದಿನ ವಿರೋಧಿ ಪಕ್ಷಗಳನ್ನೆಲ್ಲ ಒಗ್ಗೂಡಿಸಿ ಜನತಾ ಪಕ್ಷ ಕಟ್ಟಿ ಇಂದಿರಾ ವಿರುದ್ಧ ಹೋರಾಡಿ ಜಯ ಗಳಿಸಿದರು.
ಆಗಲೂ ತಾವು ಸೋಲುವ ಮುನ್ಸೂಚನೆ ಪಡೆದ ಇಂದಿರಾ ಅವರು ವಿರೋಧಿ ಒಗ್ಗೂಡುವಿಕೆಯನ್ನು ಹಾವು, ಮುಂಗುಸಿ, ನಾಯಿ, ಬೆಕ್ಕುಗಳ ಒಗ್ಗೂಡುವಿಕೆಯೆಂದೇ ಮೂದಲಿಸಿದ್ದರು. ಈ ಮಾತೇ ಸಾಕಾಗಿತ್ತು ತಾವೊಬ್ಬ ಸರ್ವಾಧಿಕಾರಿಯೆಂದು ಸಾಕ್ಷೀಕರಿಸಲು. ಇದೀಗ ಅಮಿತ್ ಶಾ ಅವರ ಬಾಯಲ್ಲಿ ಅಂಥದೇ ಮಾತುಗಳು ಹೊರ ಬಂದಿವೆ. ಆದರೆ ಹೀಗೆ ಮೂದಲಿಸುವ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಜ್ಞಾವಂತಿಕೆ ಮತದಾರರಲ್ಲಿದೆ.
-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.