‘ಪ್ರಶ್ನಿಸುವವರನ್ನೇ ಟೀಕಿಸುವುದು ಅಪಾಯಕಾರಿ’ ಎಂದಿರುವ ಪ್ರಕಾಶ್ ರೈ ಅವರ ಆತಂಕ (ಪ್ರ.ವಾ., ನ.13) ಸಕಾಲಿಕವಾಗಿದೆ. ಪ್ರಶ್ನಿಸುವವರ ಚಾರಿತ್ರ್ಯ ವಧೆ ಮಾಡುವ ಮೂಲಕ ಬಾಯಿ ಮುಚ್ಚಿಸುವ ಚಾಳಿ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ವ್ಯಾಪಿಸುತ್ತಿದೆ. ಆರೋಗ್ಯಕರ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಇದೊಂದು ಅಪಾಯಕಾರಿ ಬೆಳವಣಿಗೆ.
ಪ್ರಶ್ನೆಗೆ ಪ್ರಶ್ನೆ ಎಂದಿಗೂ ಉತ್ತರವಾಗಲಾರದು. ಇದರಿಂದ ತಪ್ಪನ್ನು ಸರಿಪಡಿಸಲೂ ಆಗದು. ಹೇಳಿಕೆಗಷ್ಟೇ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗದೆ ವಾಸ್ತವದಲ್ಲೂ ಪ್ರಜಾಪ್ರಭುತ್ವದ ತತ್ವಗಳನ್ನು ಅಳವಡಿಸಿಕೊಂಡು ಅದರ ಭಾಗವಾಗಿ ಹೆಮ್ಮೆಪಡಬೇಕಿದೆ. ಪ್ರಶ್ನಿಸುವವರು ಪರದೇಶಿಗರು, ಅಂತಹವರಿಗೆ ದೇಶದಲ್ಲಿ ಅವಕಾಶವಿಲ್ಲ ಎಂದು ಹೆದರಿಸುವುದರ ಬದಲು, ಅವರಿಗೆ ಉತ್ತರ ನೀಡುವ ಧೈರ್ಯ ತೋರಬೇಕು. ವಾದ– ಪ್ರತಿವಾದ, ಅಭಿಪ್ರಾಯಭೇದ ಇವು ಪ್ರಜಾತಂತ್ರದ ತಳಹದಿ ಎಂಬುವುದನ್ನು ಎಂದಿಗೂ ಮರೆಯಲಾಗದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.