ADVERTISEMENT

ಅಮಾನವೀಯ ಹಲ್ಲೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:30 IST
Last Updated 25 ಮೇ 2018, 19:30 IST

ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಕಾರ್ಖಾನೆಯೊಂದರ ಮಾಲೀಕ, ಚಿಂದಿ ಆಯುವ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಸುದ್ದಿ ಗುಜರಾತ್‌ನಿಂದ ವರದಿಯಾಗಿದೆ. ಆ ಘಟನೆಯನ್ನು ಕೆಲವು ಟಿ.ವಿ. ವಾಹಿನಿಗಳು ಪ್ರಸಾರವನ್ನೂ ಮಾಡಿದ್ದವು. ಅದನ್ನು ನೋಡಿ ಮೈ ಜುಂ ಎನಿಸಿತು. ಏಟು ತಿನ್ನುತ್ತಿದ್ದ ವ್ಯಕ್ತಿಯ ಆಕ್ರಂದನ ಕರುಳು ಹಿಂಡುವಂತಿತ್ತು. ಆತನ ಪತ್ನಿಯೇನೋ ತಪ್ಪಿಸಿಕೊಂಡಿದ್ದರು. ಆದರೆ ಆತನನ್ನು ಮರದ ಕೊಂಬೆಯಿಂದ ಮನಬಂದಂತೆ ಹೊಡೆಯಲಾಗುತ್ತಿತ್ತು. ಆತನ ಆಕ್ರಂದನ ಕೇಳಲಾರದೆ ಟಿ.ವಿ. ಯನ್ನು ಆಫ್ ಮಾಡಬೇಕಾದ ಮನಸ್ಥಿತಿ ನೋಡುಗರದಾಗಿತ್ತು.

ಮರುದಿನ ಪತ್ರಿಕೆಗಳಲ್ಲಿ ಆ ವ್ಯಕ್ತಿಯನ್ನು ಬಡಿದು ಸಾಯಿಸಲಾಗಿತ್ತು ಎಂಬ ಸುದ್ದಿಯೂ ಪ್ರಕಟವಾಗಿತ್ತು. ಛೆ, ಎಂಥ ಘೋರ ಕೃತ್ಯ.

ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮನುಷ್ಯ ಎಷ್ಟೇ ಸುಶಿಕ್ಷಿತನಾದರೂ ಸಂಪಾದಿಸಿದರೂ ತಿಳಿವಳಿಕೆ, ವಿವೇಕಗಳು ಇಲ್ಲದಿದ್ದರೆ ಮನುಷ್ಯನಾಗುವುದಿಲ್ಲ. ಮಾನವೀಯತೆ ಇಲ್ಲದ ಕ್ರೂರ ರಾಕ್ಷಸರಂತೆ ವರ್ತಿಸಿದ ಕಾರ್ಖಾನೆಯ ಮಾಲೀಕರಿಗೂ ನ್ಯಾಯಾಲಯ ಇದೇ ರೀತಿಯ ಶಿಕ್ಷೆ ವಿಧಿಸಿದರೆ ಸರಿ ಹೋದೀತು. ಆದರೆ ನಮ್ಮ ದೇಶದ ಕಾನೂನುಗಳಡಿಯಲ್ಲಿ ಅದಾಗುವುದೇ? ಗಾಂಧಿ ಹುಟ್ಟಿದ ನಾಡಿನಲ್ಲಿ, ಮಾನವೀಯತೆ ಇಲ್ಲದ ಇಂತಹ ಮನುಷ್ಯರು ಇನ್ನೂ ನೂರಾರು, ಸಾವಿರಾರು ಇರಬಹುದು. ಅಂಥವರೆಲ್ಲರಿಗೂ ಈ ಮೂಲಕ ಧಿಕ್ಕಾರವಿರಲಿ.

ADVERTISEMENT

ವಿಜಯ್ ಹೆಮ್ಮಿಗೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.