ADVERTISEMENT

ಆತ್ಮಹತ್ಯೆ ಭೂತ

ಪಿ.ಶಂಕರಪ್ಪ, ಶಿವಮೊಗ್ಗ
Published 24 ಜುಲೈ 2016, 19:30 IST
Last Updated 24 ಜುಲೈ 2016, 19:30 IST

‘ಪೊಲೀಸರ ಬೇಡಿಕೆಗಳಿಗೆ ಅಸ್ತ್ರವಾದ ಆತ್ಮಹತ್ಯೆ’ (ಪ್ರ.ವಾ., ಜುಲೈ 21) ಸುದ್ದಿ ಓದಿದ ಮೇಲೆ ಬೇಸರವಾಯಿತು. ಪೊಲೀಸ್‌ ಇಲಾಖೆಗೆ ಮಾತ್ರವಲ್ಲದೆ ಇತರೆ ಇಲಾಖೆಗಳಿಗೂ ಈ ವ್ಯಾಧಿ ಹರಡುತ್ತಿರುವಂತೆ ಕಾಣುತ್ತಿದೆ.

ಇದೇ ಸ್ಥಿತಿ ಮುಂದುವರಿದಲ್ಲಿ ಉನ್ನತ ಅಧಿಕಾರಿಗಳು, ಸಚಿವರು ನಿಷ್ಕ್ರಿಯರಾಗಿ ಸರ್ಕಾರಿ ಯಂತ್ರ ಜಡ್ಡುಗಟ್ಟಬಹುದು. ಹೇಳುವವರು, ಕೇಳುವವರು ಇಲ್ಲದಂತಾಗಿ ಸಾರ್ವಜನಿಕರು ಪರದಾಡುವ ಸ್ಥಿತಿ ಬರುವುದರಲ್ಲಿ ಸಂಶಯವಿಲ್ಲ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿಷ್ಟಾಚಾರ  ಅವಶ್ಯ. ಇಲ್ಲದಿದ್ದರೆ ನೌಕರರು, ಅಧಿಕಾರಿಗಳು ಹಿಡಿತವಿಲ್ಲದ ಯಂತ್ರವಾಗುತ್ತಾರೆ. ಮೈಗಳ್ಳರು, ಭ್ರಷ್ಟರು ಆತ್ಮಹತ್ಯೆ ಅಸ್ತ್ರದಿಂದ ಹೆದರಿಸುವುದರಲ್ಲಿ ಸಫಲರಾಗುತ್ತಾರೆ. ಸಾರ್ವಜನಿಕರು ತೊಂದರೆಗೆ ಒಳಗಾಗಬೇಕಾಗುತ್ತದೆ.

ಈ ಪ್ರವೃತ್ತಿ ತಡೆಗೆ ಸರ್ಕಾರ ಸೂಕ್ತ ಮಾರ್ಗ ಕಂಡುಹಿಡಿಯಬೇಕು. ಇಲ್ಲವಾದಲ್ಲಿ ಸರ್ಕಾರಿ ಯಂತ್ರ ಕುಸಿದು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗುವುದರಲ್ಲಿ ಎರಡು ಮಾತಿಲ್ಲ.  ಯಾರ ಮಾತು ಯಾರೂ ಕೇಳದಂಥ ವಾತಾವರಣ ಸೃಷ್ಟಿಯಾಗಿ ವ್ಯವಸ್ಥೆ ಪೂರ್ಣ ಹದಗೆಡುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.