ADVERTISEMENT

ಆರ್‌ಟಿಇ ರದ್ದಾಗಲಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಆರ್‌ಟಿಇ ಕಾಯ್ದೆಯನ್ನು ರದ್ದು ಮಾಡಬೇಕೆಂದಿರುವುದು (ಪ್ರ.ವಾ., ಜೂನ್‌ 26) ಸರಿಯಾಗಿಯೇ ಇದೆ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಬಡ ಮಕ್ಕಳಿಗೆ ಕಲಿಯುವ ಒಂದು ಅವಕಾಶ ಎಂಬುದಾಗಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಅರ್ಥೈಸಿ
ಕೊಂಡಿರುವುದೇ ತಪ್ಪು. ಪ್ರತಿ ಮಗುವಿಗೆ ಒಂದು ಕಿ.ಮೀ. ವ್ಯಾಪ್ತಿಯೊಳಗೆ ಶಿಕ್ಷಣದ ಲಭ್ಯತೆ ಇರಬೇಕು. ಒಂದು ವೇಳೆ ಸರ್ಕಾರಿ ಶಾಲೆ ಇಲ್ಲದಿದ್ದರೆ ಖಾಸಗಿಯಾದರೂ ಸರಿಯೆ, ಅಲ್ಲಿಗೆ ಶುಲ್ಕ ಕೊಟ್ಟಾದರೂ ಶಿಕ್ಷಣದ ವ್ಯವಸ್ಥೆ ಮಾಡಬೇಕು ಎಂದು ಕಾಯ್ದೆ ಹೇಳುತ್ತದೆ.

ಅಗತ್ಯವಿದ್ದಲ್ಲಿ ಈ ಅವಕಾಶವನ್ನು ಖಾಸಗಿ ಶಾಲೆಗಳು ಶೇ 25ರಷ್ಟು ಮಕ್ಕಳ ಸೇರ್ಪಡೆಗೆ ವಿಸ್ತರಿಸಬೇಕು ಎಂಬುದು ನಿಯಮ. ಆದರೆ ನಮ್ಮ ಶಿಕ್ಷಣ ಇಲಾಖೆ ಖಾಸಗಿಯವರ ಮೇಲೆ ಸವಾರಿ ಮಾಡಲು ಇದೂ ಒಂದು ಅವಕಾಶ ಎಂದು ಬಗೆದು ಈ ಕಾಯ್ದೆಯ ಅನುಷ್ಠಾನದಲ್ಲಿ ಆಸಕ್ತಿ ವಹಿಸಿತು. ಆದಾಯ ಮಿತಿ ವಾರ್ಷಿಕ ₹ 3.5 ಲಕ್ಷ ಇದ್ದುದರಿಂದ ಇಷ್ಟು ವರ್ಷಗಳೂ ನಿಜವಾದ ಬಡವರಿಗೆ ಈ ಅವಕಾಶ ತಪ್ಪಿ ‘ಪ್ರಭಾವಶಾಲಿ ಬಡವರಿಗೆ’ ಸಿಕ್ಕಿದೆ. ಅಂದರೆ ಹಣ ಇರುವವರೇ ಈ ಅವಕಾಶ ಗಳಿಸಿದ್ದಾರೆ.

ಈ ವರ್ಷ ಶಾಲಾ ನೆರೆಹೊರೆಯ ನಿಯಮವನ್ನು ಕಡ್ಡಾಯಗೊಳಿಸಿದ್ದರಿಂದ ಪ್ರಭಾವಶಾಲಿಗಳ ಇಚ್ಛಾನುಸಾರ ಪ್ರವೇಶಾತಿ ಆಗಿಲ್ಲ. ಆದರೆ ಈ ಕಾಯ್ದೆಯ ಅನ್ವಯದಿಂದ ಸಾಮಾಜಿಕ ಅಸಮಾನತೆ ಉಂಟಾಗಿದೆ. ಅನೇಕ ಆರ್‌ಟಿಇ  ಫಲಾನುಭವಿಗಳು ಸ್ವಂತ ಬೈಕ್, ಕಾರುಗಳಲ್ಲಿ ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಾರೆ. ಹಾಗಾಗಿ ಆರ್.ಕುಮಾರ್ ಅವರು ಬರೆದಿರುವಂತೆ (ವಾ.ವಾ., ಜೂನ್ 29) ಆರ್‌ಟಿಇ ಉದ್ದೇಶ ಕೆಲವರಾದರೂ ಬಡ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುವುದಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.