ADVERTISEMENT

ಇವರ ಫೋಟೊಗಳಷ್ಟೇ ಸಾಕೇ?

ವಿಜಯಕಾಂತ ಪಾಟೀಲ
Published 26 ನವೆಂಬರ್ 2013, 19:30 IST
Last Updated 26 ನವೆಂಬರ್ 2013, 19:30 IST

ರಾಜ್ಯದ ಬಹುಪಾಲು ಸರ್ಕಾರಿ ಶಾಲೆಗಳಲ್ಲಿ ಎಂಟು ಮಂದಿ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಸಾಹಿತಿಗಳ ಫೋಟೊಗಳಷ್ಟೇ ರಾರಾಜಿ­ಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂಬುದು ನನ್ನಂತೆಯೇ ಹಲವರ ಪ್ರಶ್ನೆ.

ಇವರೆಲ್ಲರ ಮೇಲಿರುವ ಅಪಾರ ಗೌರವವನ್ನು ಗಮನದ­ಲ್ಲಿರಿ­ಸಿಕೊಂಡೇ ಈ ಮಾತನ್ನು ಬಹುತೇಕರ ಪ್ರತಿನಿಧಿಯಾಗಿ ಆಡುತ್ತಿದ್ದೇನೆ. ಇಡೀ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಇವರು ಮಾತ್ರವೇ ಎಂದು ಮಕ್ಕಳು ತಲೆತುಂಬಿಕೊಳ್ಳುವಂತಾಗಿದ್ದು ದುರಂತವೂ ಹೌದು. ನಾಡು-–ನುಡಿ, -ಕಲೆ-–ಸಂಸ್ಕೃತಿಗಳ ಉದ್ಧಾರಕ್ಕಾಗಿ ಇವರಷ್ಟೇ ಕಟಿಬದ್ಧ­ರಾ­ಗಿದ್ದರು ಎನ್ನುವಂತಾಗಿದೆ ಈ ಫೋಟೊ ಪ್ರದರ್ಶನ ಸಂಸ್ಕೃತಿಯ ರೂಢಿ.

ನಾನು ನೋಡಿದ ಹಲವಾರು ಶಾಲೆಗಳಲ್ಲಿ, ಕೆಲವಾರು ಸಂಘ–-ಸಂಸ್ಥೆ, ಮನೆ -ಮಂದಿರ-, ಸಮ್ಮೇಳ­ನಗಳಲ್ಲೂ ಇದೇ ಪ್ರದರ್ಶನ ಪರಂಪರೆ ಮುಂದುವರಿದಿರುವುದನ್ನು ನೋಡಿದರೆ ಉಳಿದ­ವರು ಯಾರೂ ಕನ್ನಡ ಕಟ್ಟೋಣಕ್ಕೆ ಬದ್ಧರಾಗಿ ಬದುಕಿ ಹೋಗಲೇ ಇಲ್ಲವೆ. ಸಾಹಿತ್ಯ ಸೃಜಿಸಿ ಕನ್ನಡ ಸಾಹಿತ್ಯ ಲೋಕವನ್ನು ಬೆಳಗಿಸಲೇ ಇಲ್ಲವೆ. ನಾಡಿನ ಜಾನಪದ, ನಾಟಕ, ಸಂಗೀತ ಕ್ಷೇತ್ರಗಳಲ್ಲಿ ಮಿನುಗಿ ಕನ್ನಡದ ದೀಪವನ್ನು ಜಗದಗಲಕೂ ಚಾಚಲೇ ಇಲ್ಲವೆ...?

ಇನ್ನೂ ಹೆಚ್ಚೆಂದರೆ, ಪಂಪ ಪ್ರಶಸ್ತಿ ವಿಜೇತರ ಕ್ಯಾಲೆಂಡರುಗಳು ಅಲ್ಲಲ್ಲಿ ಕಾಣಸಿಗುತ್ತವೆ. ಹಾಗಾದರೆ ಪ್ರಶಸ್ತಿ ಪಡೆಯಲು, ಹೊಡಕೊ­ಳ್ಳಲು ಆಗದ, ಕನ್ನಡವನ್ನೇ ಉಸಿರಾಗಿಸಿಕೊಂಡ, ಕನ್ನಡದಲ್ಲೇ ಬರೆದು ಮಣ್ಣಾದ ಕವಿ-ಕಲಾವಿದರೆಲ್ಲರ ನೆನಪು ಮಣ್ಣಲ್ಲಿ ಮಣ್ಣಾಗಿಯೇ ಹೋಗಬೇಕೆ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.