ADVERTISEMENT

ಎಚ್‌.ಎಂ.ಟಿ. ಸ್ಥಿತಿ ಉತ್ತಮ?!

ನಾಗಾರ್ಜುನ ಸಾಗ್ಗೆರೆ
Published 27 ಜುಲೈ 2014, 19:30 IST
Last Updated 27 ಜುಲೈ 2014, 19:30 IST

ಕೇಂದ್ರ ಕೈಗಾರಿಕಾ ಸಚಿವ ಅನಂತಗೀತೆ ‘ಬೆಂಗಳೂರಿನ ಎಚ್‌.ಎಂ.ಟಿ. ಉತ್ತಮ ಸ್ಥಿತಿ­ಯಲ್ಲಿದೆ’ ಎಂದಿದ್ದಾರೆ! ಇದನ್ನು ಆಕ್ಷೇಪಿಸಿದ ಸಂಸದ ಮುದ್ದಹನುಮೇಗೌಡರು ‘ತುಮ­ಕೂರಿನ ಎಚ್‌.ಎಂ.ಟಿ. ಮುಚ್ಚುವ ಹಂತ ತಲುಪಿದೆ, ಬೆಂಗಳೂರಿನ ಎಚ್‌.ಎಂ.ಟಿ. ಹಣ­ಕಾಸು ಸಂಕಷ್ಟದಿಂದ ತನ್ನ 200 ಎಕರೆ ಭೂಮಿ­ಯನ್ನು ರಿಯಲ್‌ ಎಸ್ಟೇಟ್‌ ಉದ್ಯಮಿ­ಗಳಿಗೆ ಮಾರಿದೆ’ ಎಂದಿದ್ದಾರೆ (ಪ್ರ. ವಾ. ಜುಲೈ 22).

ಸಚಿವರಿಗೆ ಯಾವ ಕೋನದಲ್ಲಿ ಎಚ್‌.ಎಂ.ಟಿ. ಉತ್ತಮ ಸ್ಥಿತಿಯಲ್ಲಿ ಕಂಡಿತೋ ತಿಳಿಯದು! ಜುಲೈ ತಿಂಗಳು ಸೇರಿದಂತೆ 11 ತಿಂಗಳಿಂದ ಸಂಬಳ ನೀಡಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಆತ್ಮಹತ್ಯೆ ಮಾಡಿಕೊಂಡ ನೌಕರರು, ಮಕ್ಕಳು ಲೆಕ್ಕಕ್ಕೆ ಇಲ್ಲ. ಮಾನಸಿಕ, ದೈಹಿಕ ರೋಗಕ್ಕೆ ಬಲಿಯಾಗಿ  ಸತ್ತವರು, ಹಾಲಿ ನರಳುತ್ತಿರುವವರೂ ಲೆಕ್ಕಕ್ಕೆ ಸಿಗರು! 3000 ಮಂದಿ ನೌಕರರಿದ್ದ ತುಮಕೂರು ಎಚ್‌.ಎಂ.ಟಿ.ಯಲ್ಲಿ 300 ಮಂದಿ ಉಳಿದಿದ್ದೇವೆ. ‘ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದಂತೆ 300 ಜನರೂ ಖಾಲಿಯಾಗಿ ಎಚ್‌.ಎಂ.ಟಿ. ಗಡಿಯಾರ ಕಾರ್ಖಾನೆ, ವಿಜಯನಗರ ವೈಭವದ ಹಾಳು ಹಂಪೆಯಾಗಿ ಇತಿಹಾಸ ಸೇರುವ ‘ಇಳಿಕೆಯ ವಿಚಾರ’ (ಕೌಂಟ್‌ ಡೌನ್‌) ಆರಂಭವಾಗಿದೆ ಎಂದು ನೋವು, ವಿಷಾದದಿಂದ ಹೇಳದೆ ಗತ್ಯಂತರವಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.