‘ನೊಗಕ್ಕೆ ಹೆಗಲು’ ಎಂಬ ಶೀರ್ಷಿಕೆಯಡಿ ಜೂನ್ 21ರಂದು ಪ್ರಕಟವಾದ ಚಿತ್ರಕ್ಕೆ ‘ರೈತರ ಬವಣೆಯಲ್ಲ’ ಎಂಬ ಪತ್ರದಲ್ಲಿ (ವಾ.ವಾ., ಜೂನ್ 25) ಬಸವರಾಜ ಸಾದರ ಪ್ರತಿಕ್ರಿಯಿಸಿದ್ದಾರೆ. ಎಡತಾಕಿ ಹೊಡೆಯುವುದಕ್ಕೆ ಎತ್ತುಗಳನ್ನು ಅಪ್ಪಿತಪ್ಪಿಯೂ ಹೂಡುವುದಿಲ್ಲ ಎಂದು ಅವರು ಹೇಳಿರುವುದು ಸರಿಯಲ್ಲ.
ಎಡತಾಕಿ ಎಂಬುದೊಂದು ಕೃಷಿ ಪರಿಕರವಲ್ಲ. ಅದಕ್ಕೆ ಎಳೆಕುಂಟೆ ಎನ್ನುತ್ತಾರೆ. ಅಡ್ಡಾಡಿ ಸಾಲು ಮಾಡುವುದಕ್ಕೆ ಎಡತಾಕಿ (ಎಡತಾಕುವುದು) ಎಂದು ಹೇಳುತ್ತಾರೆ. ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಮಾತ್ರ ಈ ರೀತಿ ಹೆಗಲು ಕೊಟ್ಟು ಸಾಲು ಮಾಡುವ ಕಾರ್ಯದಲ್ಲಿ ತೊಡಗಿರುತ್ತಾರೆ. ಹತ್ತು ಇಪ್ಪತ್ತು ಎಕರೆ ಹತ್ತಿ, ಮೆಣಸಿನಗಿಡ, ತಂಬಾಕು ಬೆಳೆಯುವವರು ಎಳೆಕುಂಟೆಯಿಂದ ಸಾಲು ಮಾಡಲಿಕ್ಕೆ ಸಾಧ್ಯವಿಲ್ಲ. ಎರಡು ತಾಳಿನ ಕೂರಿಗೆಗೆ ಎತ್ತು ಕಟ್ಟಿಯೇ ಸಾಲು ಮಾಡುತ್ತಾರೆ. ಈಗೀಗ ಟ್ರ್ಯಾಕ್ಟರ್ನಿಂದಲೂ ಸಾಲು ಮಾಡುತ್ತಾರೆ. ಇದಕ್ಕೆ ಸಾಲು ಬಿಡುವುದು ಎಂದು ಹೇಳುತ್ತಾರೆ.
ನಿಪ್ಪಾಣಿ, ಚಿಕ್ಕೋಡಿ ಭಾಗದಲ್ಲಿ ರೈತರೇ ಎಳೆಯುವ ಪದ್ಧತಿ ಇದೆ. ಅಲ್ಲಿ ಎಕರೆ, ಅರ್ಧ ಎಕರೆ ಕೃಷಿ ಮಾಡುವ ರೈತರದು ನಿಜವಾಗಿಯೂ ಬವಣೆಯೆ. ಗಂಡ ಎಳೆಕುಂಟೆ ಎಳೆದರೆ, ಹೆಂಡತಿ ಹಿಂದೆ ಬಿತ್ತಿಗೆ ಮಾಡುತ್ತಿರುತ್ತಾಳೆ.
- ವಿರೂಪಾಕ್ಷಪ್ಪ ಕೋರಗಲ್, ಹಾವೇರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.