ಔಷಧಿ ನಿಯಂತ್ರಣ ಒಂದು ದೊಡ್ಡ ಸವಾಲೆ ಸರಿ. ವೈದ್ಯರ ಚೀಟಿಯಿಲ್ಲದೆ ಔಷಧ ಕೊಟ್ಟರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಎನ್ನುವರು ಆರೋಗ್ಯ ಸಚಿವರು. ಇದೇನೋ ಆಶಾದಾಯಕ ಬೆಳವಣಿಗೆ. ಪ್ರತೀ ಗ್ರಾಮದಲ್ಲಿ ಕಿರಾಣಿ ಅಂಗಡಿಯಲ್ಲಿ ಸಕ್ಕರೆ, ಬೆಲ್ಲದಂತೆ ಔಷಧಿಗಳು ಮಾರಾಟವಾಗುತ್ತಿವೆ.
ಪಾಪ ಮುಗ್ಧ ರೋಗಿ ಅವಸರಕ್ಕೆ ಸಿಕ್ಕಿದವರನ್ನೆ ಧನ್ವಂತರಿ ಎಂದು ಕೈಗೆ ಸಿಕ್ಕ ಮಾತ್ರೆ ನುಂಗಿ ತೆಪ್ಪಾಗಾಗುತ್ತಾರೆ. ಅವರಿಗೆ ಕಾನೂನು ಪಾಠ ಹೇಳೋರು ಯಾರು? ಇನ್ನು ಔಷಧದ ಅಂಗಡಿಯಲ್ಲಿ ಸ್ವತಃ ಔಷಧ ನಿಯಂತ್ರಕರೇ ಹೋಗಿ, ‘ಜ್ವರದ ಮಾತ್ರೆ ಎರಡು ಕೊಡಪ್ಪ’ ಎಂದ್ರೆ ತಡಮಾಡದೆ ಅಂಗಡಿಯವನೇ ‘ನೆಗಡಿ ಕೆಮ್ಮು ಇದೆಯಾ’ ಎಂಬುದಾಗಿ ಕೇಳಿ ಮೂರು ಥರ ಮಾತ್ರೆ ಕೊಟ್ಟ ನುಂಗುವ ವಿಧಾನ ಹೇಳಿ, ಪುಕ್ಕಟ್ಟೆ ಪಥ್ಯ ಹೇಳಿ ಕಳಿಸುವ ಪರಿಸ್ಥಿತಿ ಇರುವಾಗ ಕಾನೂನಿಗೆ ಗೌರವ ಎಲ್ಲಿಂದ ಬಂತು? ಅಧಿಕಾರಿ, ಅಂಗಡಿ ಮಾಲೀಕ ಮತ್ತು ರೋಗಿಗೆ ಅರಿವಿನ ಜತೆ ಕಾನೂನಿನ ಬಗ್ಗೆ ಗೌರವವಿದ್ದರೆ ಮಾತ್ರ ಪರಿಸ್ಥಿತಿ ನಿಯಂತ್ರಿಸಬಹುದು.
ಚಾಕೊಲೆಟ್ ಮಾರಿದಂತೆ ಔಷಧ ಮಾರಾಟ ಮಾಡುವವರ ಪರವಾನಗಿ ರದ್ದು ಮಾಡಬೇಕು. ಅಂತಹವರ ವಿರುದ್ಧ ಜನರೇ ಕೇಸ್ ದಾಖಲು ಮಾಡುವ ಅವಕಾಶ ಕಲ್ಪಿಸಿದಾಗ ಮಾತ್ರ ಔಷಧ ಮಾರಾಟ ನಿಯಂತ್ರಣ ಸಾಧ್ಯ.
–ಡಾ.ನಾಗೇಂದ್ರ, ಮಲ್ಲಾಡಿಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.