ADVERTISEMENT

ಕಿವಿ ಹಿಂಡಬೇಕು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 19:40 IST
Last Updated 12 ಏಪ್ರಿಲ್ 2018, 19:40 IST

'ಪ್ರತ್ಯೇಕತೆಯ ದನಿಯನ್ನು ಮೊಳಕೆಯಲ್ಲೇ ಚಿವುಟಬೇಕು' ಎಂದು ಎ. ಸೂರ್ಯಪ್ರಕಾಶ್‌ (ಪ್ರ.ವಾ., ಸೂರ್ಯ-ನಮಸ್ಕಾರ, ಏ. 12) ಅಪ್ಪಣೆ ಕೊಟ್ಟಿರುವರಾದರೂ ಪ್ರತ್ಯೇಕತೆಯ ಮನೋಭಾವವನ್ನು ಸಂಪೂರ್ಣವಾಗಿ ಚಿವುಟುವುದು ಅಸಾಧ್ಯ. ಇದಕ್ಕೆ ಕೇಂದ್ರದಲ್ಲಿ ಚುಕ್ಕಾಣಿ ಹಿಡಿದ ಸರ್ಕಾರಗಳೇ ಕಾರಣ. ಬಹುಪಾಲು ಸರ್ಕಾರಗಳು ಇಲ್ಲಿಯವರೆಗೂ ಹಿಂದಿ ಭಾಷಿಕ ರಾಜ್ಯಗಳ ಪರವಾಗಿಯೇ ನಿಲುವು ತಳೆದಿರುವುದರಿಂದ ಜನರಲ್ಲಿ ಅಂತಹ ಭಾವನೆ ಮಡುಗಟ್ಟಿದೆ.

ದಕ್ಷಿಣದ ರಾಜ್ಯಗಳೆಂದರೆ ಏನೋ ಒಂದು ಬಗೆಯ ಅಸಡ್ಡೆ. ಮಲತಾಯಿ ಧೋರಣೆಗೆ ನೂರೆಂಟು ನಿದರ್ಶನಗಳು ಸಿಗುತ್ತವೆ. ಅಭಿವೃದ್ಧಿ ಪಥದಲ್ಲಿ ಸತತವಾಗಿ ಎಡವುತ್ತಿದ್ದರೂ ದರ್ಪಕ್ಕೇನೂ ಕೊರತೆಯಿಲ್ಲ. ಸಂಪನ್ಮೂಲ ವಿತರಣೆಯಲ್ಲಿ ಉತ್ತರದ ರಾಜ್ಯಗಳಿಗೆ ದಕ್ಷಿಣದ ರಾಜ್ಯಗಳು ಇನ್ನೆಷ್ಟು ತ್ಯಾಗ ಮಾಡಬೇಕು? ನಮ್ಮ ಭಾಷೆಗಳ ಅಸ್ಮಿತೆ ಕಾಪಾಡಿಕೊಳ್ಳಲು ಸದಾ ಹೋರಾಡುತ್ತಲೇ ಇರಬೇಕಾದ ಸ್ಥಿತಿ ಇರುವುದು ಸುಳ್ಳೇ?

ಹಿಂದಿ ಹೇರಿಕೆಯ ಹುನ್ನಾರಗಳು ನಿತ್ಯ ನಿರಂತರ ಎಂಬಂತಾಗಿದೆ. ಯಾವುದೋ ಒಂದು ರೂಪದಲ್ಲಿ ಅದು ನಡೆಯುತ್ತಲೇ ಇರುತ್ತದೆ. ಸಿನಿಮಾ, ಧಾರಾವಾಹಿಗಳ ಮೂಲಕವೂ ಹಿಂದಿ ಭಾಷೆಯನ್ನು ಹಿಂದಿಯೇತರರ ಮೇಲೆ ಹೇರುತ್ತಿರುವುದು ಅಸಹನೀಯ. ಇದಕ್ಕೆ ಉತ್ತರದವರನ್ನಷ್ಟೇ ದೂರಿದರೆ ಪ್ರಯೋಜನವಿಲ್ಲ. ನಮ್ಮ ಜನರಲ್ಲಿನ ಅಭಿಮಾನ ಕೊರತೆಯೂ ಅದಕ್ಕೆ ಕಾರಣ. ಈಗ ಎದ್ದಿರುವ ಕೂಗು ಎಚ್ಚರಿಕೆಯ ಘಂಟೆ. ಕೇಂದ್ರ ಸರ್ಕಾರದ ಕಿವಿ ಹಿಂಡುವ ಕಾಲ ಬಂದಿದೆ.

ADVERTISEMENT

–ಬಿ ರಮೇಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.