ಗ್ರಾಮೀಣ ಪ್ರದೇಶದಲ್ಲಿ ತುರ್ತು ಸನ್ನಿವೇಶಗಳಿಗೆ ಸ್ಪಂದಿಸಲು ಆಯುಷ್ ವೈದ್ಯ ಪದವೀಧರರಿಗೆ ಅಲೋಪಥಿ ಔಷಧ ವ್ಯವಸ್ಥೆಯ ಕನಿಷ್ಠ ತಿಳಿವಳಿಕೆ ಹೊಂದಲು ಅವರಿಗೆ ಆರು ತಿಂಗಳ ತರಬೇತಿ ಕೊಡುವುದು ಸರ್ಕಾರದ ಉದ್ದೇಶ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ. ಸರ್ಕಾರಿ ಸೇವೆಯ ಹೊರಗಿರುವ ಆಯುಷ್ ವೈದ್ಯರಿಗೆ ಇದು ಅನ್ವಯಿಸುವುದಿಲ್ಲ ಎಂದೂ ಹೇಳಿದ್ದಾರೆ (ಸಂಗತ, ಜ. 13).
ಸಚಿವರಿಗೆ ಗ್ರಾಮೀಣ ಪ್ರದೇಶದಲ್ಲಿನ ಆರೋಗ್ಯ ಸೇವೆಯ ಬಗೆಗೆ ಮಾಹಿತಿ ಕೊರತೆ ಇದ್ದಂತಿದೆ. ಹಳ್ಳಿಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯುಷ್ ವೈದ್ಯರಿಗೆ ಸೂಕ್ತ ಆಯುರ್ವೇದ ಔಷಧಿಗಳು ಲಭ್ಯವಿರದ ಕಾರಣ ಮತ್ತು ಅಲ್ಲಿನ ಜನರ ಅಪೇಕ್ಷೆಯ ಮೇರೆಗೆ ಅವರು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಅಲ್ಲಿನ ಸೇವೆಯ ಗುಣಮಟ್ಟದಿಂದ ಬೇಸತ್ತ ಜನರೂ ಅನಿವಾರ್ಯವಾಗಿ ಖಾಸಗಿ ಆಯುಷ್ ವೈದ್ಯರ ಹತ್ತಿರ ಅಲೋಪಥಿ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ.
ಆದಕಾರಣ, ಸರ್ಕಾರಿ ಆಯುಷ್ ವೈದ್ಯರ ಜೊತೆಗೆ ಖಾಸಗಿ ಆಯುಷ್ ವೈದ್ಯರಿಗೂ ಅಲೋಪಥಿ ಔಷಧಿಗಳ ತಿಳಿವಳಿಕೆಗಾಗಿ ತರಬೇತಿ ನೀಡಿದರೆ, ಗ್ರಾಮೀಣ ಪ್ರದೇಶಗಳಿಗೆ ತೆರಳಿ ಸೇವೆ ಸಲ್ಲಿಸಲು ಮನಸ್ಸಿರದ ಅಲೋಪಥಿ ವೈದ್ಯರ ಮರ್ಜಿ ಕಾಯುವ ಅವಶ್ಯಕತೆ ಸರ್ಕಾರಕ್ಕೆ ಬಾರದು. ನಕಲಿ ವೈದ್ಯರ ಹಾವಳಿಯನ್ನೂ ನಿಯಂತ್ರಿಸಬಹುದು.
-ಆನಂದ ರಾಮತೀರ್ಥ, ಜಮಖಂಡಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.