‘ಸರ್ದಾರ್ ಪಟೇಲರಿಗೆ ಸಲ್ಲಬೇಕು ಅರ್ಹ ಗೌರವ’ ಎ. ಸೂರ್ಯಪ್ರಕಾಶ್ ಅವರ ಲೇಖನ (ಪ್ರ.ವಾ., ನ.15) ಸರ್ದಾರ್ ವಲ್ಲಭಭಾಯ್ ಪಟೇಲರ ವ್ಯಕ್ತಿತ್ವವನ್ನು ತಿಳಿಸುವುದರ ಜೊತೆಗೆ ಜವಾಹರಲಾಲ ನೆಹರು ಅವರ ಸೇಡಿನ ರಾಜಕಾರಣವನ್ನೂ ಪರಿಚಯಿಸಿದೆ. ನೆಹರು ತಮ್ಮ ಜೊತೆಗಾರರಿಂದ ಸ್ವಲ್ಪವೂ ವಿರೋಧವನ್ನು ಸಹಿಸುತ್ತಿರಲಿಲ್ಲ.
ತಮ್ಮ ಮಂತ್ರಿಮಂಡಲದ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳನ್ನು ಮಾತ್ರವಲ್ಲ, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದರನ್ನೂ, ಪಟೇಲರ ಅಂತಿಮ ಸಂಸ್ಕಾರಕ್ಕೆ ಹೋಗಕೂಡದೆಂದು ಆಗ್ರಹಿಸಿದ್ದರು. ಆದರೆ ಡಾ. ರಾಜೇಂದ್ರ ಪ್ರಸಾದರು ಮುಂಬೈಗೆ ಹೋದರು, ಅದು ಅನ್ಯ ಸಂಗತಿ.
ಡಾ. ರಾಜೇಂದ್ರ ಪ್ರಸಾದರು ವಿಷಯಾಧರಿತವಾಗಿ ಅನೇಕ ಬಾರಿ ನೆಹರು ಅವರನ್ನು ವಿರೋಧಿಸಿದ್ದರು. ರಾಜೇಂದ್ರ ಪ್ರಸಾದರು ಬಿಹಾರದಲ್ಲಿ ಕಾಲವಾದಾಗ, ನೆಹರು ಅಲ್ಲಿಗೆ ಹೋಗಲೇ ಇಲ್ಲ. ಅಂದಿನ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್, ತಮ್ಮ ಜೊತೆ ಬಿಹಾರಕ್ಕೆ ಬರುವಂತೆ ನೆಹರುಗೆ ತಿಳಿಸಿದ್ದುಂಟು. ಆದರೂ ನೆಹರು, ರಾಷ್ಟ್ರಪತಿಗಳ ಮಾತನ್ನು ನಿರಾಕರಿಸಿ ರಾಜಸ್ಥಾನದ ಕಾರ್ಯಕ್ರಮವೊಂದಕ್ಕೆ ಹೋದರು.
‘ಭಾರತದ ರಾಜಕೀಯ ವಲಯದಲ್ಲಿ ದ್ವೇಷದ ರಾಜಕಾರಣವನ್ನು ಅನಾವರಣ ಮಾಡಿದವರು ನೆಹರು ಅವರೇ’ ಎನ್ನವುದು ನಿಜಕ್ಕೂ ವಿಷಾದದ ಸಂಗತಿ. ಇದೇ ಚಾಳಿಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಮುಂದುವರೆಸಿದರು. ಅತ್ಯಂತ ವಿಷಮ ಸನ್ನಿವೇಶದಲ್ಲಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಂಡು ದೇಶವನ್ನು ಮುನ್ನೆಡೆಸಿದ ಪಿ.ವಿ. ನರಸಿಂಹರಾವ್ ಅವರನ್ನು ಕಾಂಗ್ರೆಸ್ ಪಕ್ಷ ಇಂದು ನೆನಪಿಸಿಕೊಳ್ಳದಿರುವುದು ಒಂದು ನಿದರ್ಶನ.
–ಎಸ್. ಎನ್. ಶಿವರುದ್ರಸ್ವಾಮಿ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.