ADVERTISEMENT

ನಾಳೆ ಕಂಡವರಾರು ?

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:28 IST
Last Updated 20 ಏಪ್ರಿಲ್ 2017, 19:28 IST

‘ನನ್ನ ನೇತೃತ್ವದಲ್ಲಿಯೇ ಮುಂದಿನ ಚುನಾವಣೆ!’

‘ಮುಂದಿನ ಮುಖ್ಯಮಂತ್ರಿ ನಾನೇ!’ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂಥ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ವೈ ಹಾಗೂ ಎಚ್.ಡಿ.ಕುಮಾರಸ್ವಾಮಿಯವರದೂ ಇದೇ ಮಾತು. ಇವರ ಮಾತುಗಳನ್ನು ಕೇಳಿದಾಗ ಮಹಾಭಾರತದ ಪ್ರಸಂಗವೊಂದು ನೆನಪಾಯಿತು.

ADVERTISEMENT

ಧರ್ಮರಾಯ ಜನತಾ ದರ್ಶನ ನಡೆಸುತ್ತಿದ್ದ. ತಮ್ಮ ಕಷ್ಟ ಹೇಳಿಕೊಳ್ಳುತ್ತಾ ಪ್ರಜೆಗಳು ಧರ್ಮರಾಯನಲ್ಲಿ ಮೊರೆಯಿಡುತ್ತಿದ್ದರು. ಧರ್ಮರಾಯ ಅವರ ಬೇಡಿಕೆಗೆ ತಕ್ಕಂತೆ ಪರಿಹಾರ ನೀಡುತ್ತಿದ್ದ. ಸಾಯಂಕಾಲವಾಗುತ್ತಾ ಬಂತು. ಪ್ರಜೆಯೊಬ್ಬ ಬಂದು ತನ್ನ ಸಂಕಷ್ಟ ತೋಡಿಕೊಂಡ. ಸಹಾಯ ಮಾಡುವಂತೆ ಕೋರಿಕೊಂಡ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಧರ್ಮರಾಯ ‘ಈಗ ಸೂರ್ಯಾಸ್ತದ ಸಮಯವಾಯಿತು. ನೀನು ನಾಳೆ ಬಾ’ ಎಂದ. ಧರ್ಮರಾಯನ ಮಾತು ಕೇಳಿದ ತಕ್ಷಣ ಅಲ್ಲಿಯೇ ಇದ್ದ ಭೀಮಸೇನ ನಕ್ಕುಬಿಟ್ಟ. ಧರ್ಮರಾಯನಿಗೆ ಇರುಸು ಮುರುಸಾಗಿ ಭೀಮಸೇನನನ್ನು ಕೇಳಿದ ‘ನೀನು ನಕ್ಕಿದ್ದೇಕೆ?’

ಭೀಮಸೇನ ಹೇಳಿದ ‘ನೀನು ಆತನಿಗೆ ನಾಳೆ ಬಾ, ನಿನಗೆ ಸಹಾಯ ಮಾಡುತ್ತೇನೆ ಎಂದು ಹೇಳಿದೆಯಲ್ಲಾ ಅದಕ್ಕೆ ನಗುಬಂತು. ನಕ್ಕೆ’

‘ಅದರಲ್ಲಿ ನಗುವ ವಿಚಾರ ಏನಿದೆ?’ ಎಂದು ಪ್ರಶ್ನಿಸಿದ ಧರ್ಮರಾಯ. ಅದಕ್ಕೆ ಭೀಮಸೇನ ನೀಡಿದ ಉತ್ತರ ಮಾರ್ಮಿಕವಾಗಿತ್ತು.

‘ಅಣ್ಣಾ, ನೀನು ಆತನಿಗೆ ನಾಳೆ ಸಹಾಯ ಮಾಡುತ್ತೇನೆಂದು ಭರವಸೆ ನೀಡಿದೆಯಲ್ಲಾ? ನೀನು ನಾಳೆಯವರೆಗೆ ಬದುಕಿರುತ್ತಿ ಎಂಬ ಭರವಸೆ ಇದೆಯೇ? ಈ ವಿಷಯ ಯೋಚಿಸಿ ನಗು ಬಂತು ಅಷ್ಟೇ’ ಎಂದ.

ಮಹಾಭಾರತದ ಈ ಪ್ರಸಂಗ ಇಂದಿಗೂ ಪ್ರಸ್ತುತವಲ್ಲವೇ?
-ಪಿ.ಜೆ. ರಾಘವೇಂದ್ರ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.