‘ಅನೈತಿಕ ಮೈತ್ರಿಕೂಟಗಳಿಗೆ ಬೇಕು ಅಂಕುಶ’ (ಪ್ರ.ವಾ., ಜೂನ್ 7) ಲೇಖನದಲ್ಲಿ ಕೆಲವು ಮಹತ್ತರ ವಿಷಯಗಳು ಕಾಣದಾಗಿವೆ. ಸೂರ್ಯಪ್ರಕಾಶ್ ಅವರು, ಕರ್ನಾಟಕದ ಚುನಾವಣೆಯ ಜೊತೆಗೆ ಗೋವಾ, ಮಣಿಪುರ, ಮಿಜೊರಾಂ, ಬಿಹಾರ, ನಾಗಾಲ್ಯಾಂಡ್ ಚುನಾವಣೆಗಳಲ್ಲಿ ನಡೆದ ಅನೈತಿಕತೆಯನ್ನು ಕೈಬಿಟ್ಟಿರುವ ಲೋಪ ಎದ್ದು ಕಾಣುತ್ತದೆ. ಕರ್ನಾಟಕದ ರಾಜಕೀಯ ನಾಟಕ, ಮೇಲಿನ ರಾಜ್ಯಗಳಲ್ಲಿ ನಡೆದ ನಾಟಕಗಳ ಪುನರಾವರ್ತನೆ ಅಷ್ಟೇ.
ತದ್ವಿರುದ್ಧ ಇರುವ ಪಕ್ಷಗಳು ಚುನಾವಣೆಯ ಪೂರ್ವದಲ್ಲಿ ಒಪ್ಪಂದ ಮಾಡಿಕೊಂಡರೆ ‘ನೈತಿಕ’, ನಂತರ ಆದರೆ ಅದು ‘ಅನೈತಿಕ’ ಎಂದು ನಿರ್ಣಯಿಸುವವರಾರು? ‘ಪಕ್ಷಾಂತರ’ದ ಪಿಡುಗನ್ನು ಒಪ್ಪಿಕೊಂಡು, ಕಾನೂನಿನ ಪ್ರಕಾರ ಪಕ್ಷಾಂತರವಾದರೆ ಅದು ನೈತಿಕ ಇಲ್ಲದಿದ್ದರೆ ಅನೈತಿಕ ಎನ್ನುವುದೂ ಅರ್ಥವಾಗದ ವ್ಯಾಖ್ಯಾನ.
ವ್ಯಕ್ತಿ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುವ ಕಾನೂನು, ಚುನಾವಣೆಯಲ್ಲಿ ಗೆದ್ದ ಪಕ್ಷಗಳ ಸ್ವಾತಂತ್ರ್ಯವನ್ನು ವಾದ ವಿವಾದದಿಂದ ಕಸಿದುಕೊಳ್ಳಬಹುದೇ? ಕರ್ನಾಟಕದಲ್ಲಿ ಮತ್ತು ಇನ್ನಿತರ ಕಡೆಗಳಲ್ಲಿ ಸರ್ಕಾರ ರಚನೆಯಾಗಿರುವುದು ಚುನಾವಣೆಯಲ್ಲಿ ಗೆದ್ದ ಪಕ್ಷಗಳ ಚುನಾಯಿತ ಸದಸ್ಯರ ಒಡಂಬಡಿಕೆಯೇ ಹೊರತು, ಸೂರ್ಯಪ್ರಕಾಶ್ ಹೇಳಿರುವಂತೆ ಸೋತವರಿಂದಲ್ಲ.
ತಮಗೆ ಬೇಕಾದಂತೆ ಸಂದರ್ಭಗಳನ್ನು ವಿಶ್ಲೇಷಿಸುವ ಪಕ್ಷಗಳು, ‘ಸ್ವತಂತ್ರ’ ಅಭ್ಯರ್ಥಿಗಳನ್ನು ನಿಷೇಧಿಸುವುದಿಲ್ಲವೇಕೆ? ಜೊತೆಗೆ, ಎಲ್ಲರಿಗೂ ಪಕ್ಷಾಂತರದ ಪಿಡುಗು ಬೇಡವಾದರೆ, ‘ಪಕ್ಷಾಂತರ’ ಮಾಡಿದವರು ಯಾರೇ ಆಗಲಿ, ಮುಂದೈದು ವರ್ಷಗಳಲ್ಲಿ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಲು ಅರ್ಹತೆಯನ್ನು ಕಳೆದುಕೊಳ್ಳುವಂತಹ ಕಾನೂನಿಗೆ ಒಪ್ಪಿಗೆ ಕೊಡುವುದಿಲ್ಲವೇಕೆ ?
-ಕೆ.ಎನ್. ಭಗವಾನ್, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.