ADVERTISEMENT

ನಿಸರ್ಗ ನಿಯಮ

ಸಹನಾ ಕಾಂತಬೈಲು
Published 30 ಜೂನ್ 2015, 19:30 IST
Last Updated 30 ಜೂನ್ 2015, 19:30 IST

‘ಹಾವನ್ನು ಹಾವು ನುಂಗಿತ್ತಾ...!’ (ಪ್ರ.ವಾ., ಜೂನ್‌ 25) ಸುದ್ದಿ ಓದಿ ನಮ್ಮ ಜನರ ಅಜ್ಞಾನದ ಬಗ್ಗೆ ಏನು ಹೇಳಬೇಕೊ  ತಿಳಿಯಲಿಲ್ಲ. ಭರಮಸಾಗರದ ಖಾಸಗಿ ಬಸ್ ನಿಲ್ದಾಣ ಬಳಿಯ ಗೌಡ್ರ ಮುರುಗೇಂದ್ರಪ್ಪ ಎಂಬುವರ ಮನೆ ಹಿಂಭಾಗದ ಅಂಗಳದಲ್ಲಿ ದೊಡ್ಡ ಕೇರೆ ಹಾವೊಂದು ಹಸಿರು ಹಾವನ್ನು ಹಿಡಿದಿದೆ.

ಹಾವು ಹಿಡಿಯುವ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸಲಾಯಿತು. ಸುತ್ತ ಜನರು ನೆರೆದ ಕಾರಣ ತಲೆಭಾಗದವರೆಗೆ ನುಂಗಿದ್ದ ಹಸಿರುಹಾವನ್ನು ಕೇರೆಹಾವು ಹೊರಕ್ಕೆ ಹಾಕಿದೆ. ನಂತರ ಹಾವು ಹಿಡಿಯುವ ವ್ಯಕ್ತಿ ಎರಡೂ ಹಾವುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದೇ ಆ ಸುದ್ದಿ. ಅಷ್ಟಕ್ಕೂ ಹಾವು ಇದ್ದದ್ದು ಅಂಗಳದಲ್ಲಿ. 

ಮನೆಯೊಳಗೆ ಅಲ್ಲ. ಮತ್ತೇಕೆ ಹಾವು ಹಿಡಿಯುವ ವ್ಯಕ್ತಿ? ಕೇರೆ ಹಾವು, ಹಸಿರು ಹಾವು ಎರಡೂ ನಿರುಪದ್ರವಿ ಜೀವಿಗಳು, ವಿಷಕಾರಿಯಲ್ಲ. ಕೇರೆ ಹಾವಂತೂ ಇಲಿ, ಹೆಗ್ಗಣಗಳನ್ನು ತಿಂದು ನಮಗೆ ಉಪಕಾರ ಮಾಡುತ್ತದೆ. ಕೇರೆ ಹಾವು ಮತ್ತು ಹಸಿರು ಹಾವು ನಮ್ಮ ಮನೆಯೊಳಗೆ ಹಲವು ಬಾರಿ ಬಂದಿದೆ. ಯಾವುದೇ ಉಪದ್ರ ಮಾಡಿಲ್ಲ.

ಒಮ್ಮೆಯಂತೂ 15 ಅಡಿಗಿಂತ ಉದ್ದದ ಕಾಳಿಂಗ ಸರ್ಪ ನಮ್ಮ ಮನೆ ಬಾಗಿಲಲ್ಲಿ ಕೇರೆ ಹಾವನ್ನು ನುಂಗಿತ್ತು. ಆಮೇಲೆ ಅದರ ಪಾಡಿಗೆ ಅದು ಎಲ್ಲೋ ಗಿಡಗಳ ಸಂದಿಯಲ್ಲಿ ನುಸುಳಿ ಮರೆಯಾಯ್ತು. ಆ ಕಡು ವಿಷ ಸರ್ಪವೂ ನಮಗೆ ತೊಂದರೆ ಕೊಡಲಿಲ್ಲ. ಇದನ್ನು ನಾನು ಯಾಕೆ ಹೇಳಿದೆನೆಂದರೆ ದೊಡ್ಡ ಹಾವಿಗೆ ಸಣ್ಣ ಹಾವು ಆಹಾರ. ಇದು ನಿಸರ್ಗ ನಿಯಮ. ಅದಕ್ಕೆ ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ಹಾವು ಹಿಡಿಸುವುದು ಮೂರ್ಖತನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.