ಅಕ್ರಮ ಆಸ್ತಿ ಸಂಪಾದನೆ ಆರೋಪದ ಪ್ರಕರಣದಲ್ಲಿ ಸುದೀರ್ಘ 18 ವರ್ಷಗಳ ಕಾಲ ನ್ಯಾಯ ಸಮರ ನಡೆಸಿದ ತಮಿಳುನಾಡಿನ ಪ್ರಭಾವಿ ರಾಜಕಾರಣಿ ಜೆ. ಜಯಲಲಿತಾ ಅವರು ಕೊನೆಗೂ ಜೈಲು ಸೇರಿರುವುದು ನ್ಯಾಯಾಂಗ ವ್ಯವಸ್ಥೆಗೆ ಸಿಕ್ಕ ಜಯವಾಗಿದೆ.
1996ರಲ್ಲಿ ಅವರ ಮನೆಯ ಮೇಲೆ ದಾಳಿ ಮಾಡಿದಾಗ 28 ಕೆ.ಜಿ. ಚಿನ್ನ, 1,165 ಕೆ.ಜಿ. ಬೆಳ್ಳಿ, ಅತ್ಯಂತ ಬೆಲೆ ಬಾಳುವ 91 ವಾಚುಗಳು, 10 ಸಾವಿರದಷ್ಟು ಸೀರೆ, 750 ಜೋಡಿ ಚಪ್ಪಲಿಗಳು ಸಿಕ್ಕಿದ್ದನ್ನು ಕಂಡು ಜನ ಗಾಬರಿಗೊಂಡಿದ್ದರು. ಈ ಪ್ರಕರಣ ದಾಖಲಾದಾಗ ‘ಆರೋಪ ಸಾಬೀತಾಗುವುದಿಲ್ಲ ಬಿಡಿ’ ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು.
ನಮ್ಮ ನ್ಯಾಯಾಂಗ ವ್ಯವಸ್ಥೆಯ ಬೇರುಗಳು ಗಟ್ಟಿಯಾಗಿರುವುದರಿಂದ ಪ್ರಭಾವಿ ರಾಜಕಾರಣಿಗೆ ಶಿಕ್ಷೆ ಆಗಿದೆ. ದೇಶದಲ್ಲಿ ಇಂತಹ ಅನೇಕ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಅವುಗಳಿಗೂ ಅಂತ್ಯ ಬಂದೇ ಬರುತ್ತದೆ. ಜಯಲಲಿತಾ ಅಕ್ರಮ ಗಳಿಕೆ, ತಾನ್ಸಿ ಭೂ ಅಕ್ರಮ, 2ಜಿ ಹಗರಣದಂತಹ ಅನೇಕ ಪ್ರಕರಣಗಳನ್ನು ಕೆದಕುವ ಧೈರ್ಯ ತೋರಿದ ಸುಬ್ರಮಣಿಯನ್ ಸ್ವಾಮಿ ಅವರನ್ನು ಅಭಿನಂದಿಸಲೇಬೇಕು.
ಈ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ ವಿಶೇಷ ಕೋರ್ಟ್ನ ನ್ಯಾಯಾಧೀಶ ಜಾನ್ ಮೈಕಲ್ ಡಿ ಕುನ್ಹ ಅವರ ನ್ಯಾಯ ನಿಷ್ಠುರ ನಿಲುವಿಗೆ ಜೈಹೋ ಹೇಳಲೇಬೇಕು. ಈ ತೀರ್ಪು ನೋಡಿದ ಮೇಲಾದರೂ ನಮ್ಮ ರಾಜಕಾರಣಿಗಳು ಬುದ್ಧಿ ಕಲಿಯಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.