ADVERTISEMENT

ಬಸ್‌ ಸೌಲಭ್ಯ ವಿಸ್ತರಿಸಲಿ

ಕುಂದು ಕೊರತೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 22 ಜೂನ್ 2015, 19:30 IST
Last Updated 22 ಜೂನ್ 2015, 19:30 IST

ಉತ್ತರಹಳ್ಳಿ – ಕೆಂಗೇರಿ ರಸ್ತೆಯಲ್ಲಿ ಬರುವ ಚನ್ನಸಂದ್ರದ ಬಳಿಯ ಬನಶಂಕರಿ 6ನೆ ಹಂತ 2ನೆ ಬಡಾವಣೆಯ ವ್ಯಾಪ್ತಿಯ ಮತ್ತು ಕರಿಯನಪಾಳ್ಯ ಗ್ರಾಮದ ನಿವಾಸಿಗಳು ಬಸ್‌ ಸೌಲಭ್ಯ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ಬೆಳಿಗ್ಗೆ, ಮಧ್ಯಾಹ್ನ ಒಂದೆರಡು ಬಸ್‌ಗಳು ಬಂದು ಹೋಗುತ್ತಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನ ದೊರೆಯುತ್ತಿಲ್ಲ.

ಬಡಾವಣೆ ವ್ಯಾಪ್ತಿಯ ಮತ್ತು ಕರಿಯನ ಪಾಳ್ಯದ ಸುತ್ತಮುತ್ತಲಿನ ಜನರು ಮತ್ತು ಶಾಲೆ – ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಚನ್ನಸಂದ್ರ, ಉತ್ತರಹಳ್ಳಿ, ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ಗೆ ಸಂಚರಿಸಲು ಒಂದೂವರೆ ಎರಡು ಕಿ.ಮೀ ದೂರ ಕ್ರಮಿಸಿ ಚನ್ನಸಂದ್ರದಲ್ಲಿ ಬಸ್‌ ಹಿಡಿದು ಪ್ರಯಾಣಿಸಬೇಕಾಗಿದೆ.

ದಾರಿ ಮಧ್ಯೆ (ಡಬಲ್‌ ರೋಡ್‌) ಬೀದಿ ದೀಪಗಳೂ ಇಲ್ಲದ್ದರಿಂದ ಸಂಜೆ ಹೊತ್ತು ಉದ್ಯೋಗದಿಂದ ಮರಳುವವರು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದೇ ಮನೆ ತಲುಪಬೇಕಾಗಿದೆ.  ಕರಿಯನ ಪಾಳ್ಯಕ್ಕೆ ಉತ್ತಮ ರಸ್ತೆ ಸಂಪರ್ಕ ಇದ್ದರೂ ಬಸ್‌ಗಳ ಸಂಚಾರ ಇಲ್ಲವೇ ಇಲ್ಲ ಎನ್ನಬಹುದು.

ಚನ್ನಸಂದ್ರ ಮಾರ್ಗವಾಗಿ (ವಿಷ್ಣುವರ್ಧನ ರಸ್ತೆ) ಸಂಚರಿಸುವ ಬಸ್‌ಗಳಲ್ಲಿ ಕೆಲವನ್ನಾದರೂ ಕರಿಯನಪಾಳ್ಯದ ಮಾರ್ಗವಾಗಿ ಓಡಿಸಲು ಬೆಂಗಳೂರು ಮಹಾನಗರ ಸಾರಿಗೆ ನಿಗಮವು (ಬಿಎಂಟಿಸಿ) ಕ್ರಮ ಕೈಗೊಂಡರೆ ಈ ಭಾಗದ ನಿವಾಸಿಗಳ ಬಹಳ ದಿನಗಳ ಸಮಸ್ಯೆ ದೂರವಾಗಲಿದೆ.

ಬಸ್‌ಗಳ ಸಂಚಾರವು ಆರಂಭಗೊಂಡರೆ ಶಶಿಧರ ಮತ್ತು ದ್ವಾರಕಾನಗರ ಬಡಾವಣೆ ನಿವಾಸಿಗಳಿಗೂ ಅನುಕೂಲವಾಗಲಿದೆ. ಆದಿತ್ಯ ಬೇಕರಿ, ಕರಿಯನಪಾಳ್ಯ, ದ್ವಾರಕಾನಗರ, ಪಟಾಲಮ್ಮ ದೇವಸ್ಥಾನ ಮಾರ್ಗದ ಮೂಲಕ ಬಸ್‌ಗಳನ್ನು ಓಡಿಸಿದರೆ ಬಿಎಂಟಿಸಿಗೆ ಆರ್ಥಿಕ ಹೊರೆಯೂ ಆಗಲಾರದು. ಈ ಬೇಡಿಕೆ ಆದಷ್ಟು ಬೇಗ ಈಡೇರಲಿ ಎಂದು ಆಶಿಸುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.