ADVERTISEMENT

ಬಿ.ಕಾಂ.ನಲ್ಲಿ ಕನ್ನಡ ಕಡ್ಡಾಯವಾಗಲಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2014, 19:30 IST
Last Updated 29 ಜುಲೈ 2014, 19:30 IST

ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳೂ ತಮ್ಮ ಭಾಷಾನೀತಿಯಲ್ಲಿ ಯಾವುದೇ ಪದವಿ ಹಂತ­ದಲ್ಲಿ ನಾಲ್ಕು ಸೆಮಿಸ್ಟರ್‌ಗಳಿಗೆ ಅವಶ್ಯಕ ಭಾಷಾ ವಿಷಯದ ಕಲಿಕೆಯನ್ನು ಕಡ್ಡಾಯ­ಗೊಳಿಸಿ ಬಿ.ಎ., ಬಿ.ಕಾಂ., ಬಿ.ಎಸ್ಸಿ ತರಗತಿಗಳಿಗೆ ಕನ್ನಡ ಅವಶ್ಯಕವನ್ನು ಅಳವಡಿಸಿ ತಮ್ಮ ಭಾಷಾ ಪ್ರೇಮವನ್ನು ಮೆರೆದಿವೆ.

ಆದರೆ ಕರ್ನಾಟಕ ವಿಶ್ವವಿದ್ಯಾಲಯ ಮಾತ್ರ ಎರಡನೇ ವರ್ಷದ ಬಿ.ಕಾಂ. ಪದವಿ ಶಿಕ್ಷಣದಲ್ಲಿ ಕನ್ನಡವನ್ನು ಅಳವಡಿಸದೇ ಕನ್ನಡ ವಿರೋಧಿ ನಿಲುವನ್ನು ಪ್ರಕಟಿಸುತ್ತಾ ಬಂದಿದೆ.

ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ಯಶಸ್ವಿಯಾಗಿ ಆಡಳಿತದಲ್ಲಿ ಜಾರಿಗೆ ತರ­ಬೇಕಾ­ದರೆ ಉನ್ನತ ಶಿಕ್ಷಣದ ಎಲ್ಲ ಸ್ತರಗಳಲ್ಲಿ ಕನ್ನಡ ಅಧ್ಯಯನಕ್ಕೆ ಮಹತ್ವದ ಸ್ಥಾನ ಸಿಗಲೇಬೇಕು.   

ಬ್ಯಾಂಕಿಂಗ್ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕನ್ನಡವನ್ನು ಜಾರಿಗೆ ತರುವ ಸರ್ಕಾರದ ಸಂಕಲ್ಪಕ್ಕೆ ಬಿ.ಕಾಂ. ಪದವಿಯಲ್ಲಿ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸುವುದು ಅನಿವಾರ್ಯ. ಗಮನಿಸಬೇಕಾದ ಅಂಶವೆಂದರೆ ಇದೇ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ. ಎರಡನೇ ವರ್ಷದ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದಾರೆ. ಆದರೆ  ಬಿ.ಕಾಂ. ಎರಡನೇ ವರ್ಷದ ತರಗತಿಗೆ ಅಳವಡಿಸದಂತೆ ತಡೆಯ­ಲಾಗಿದೆ.

ಭಾಷಾಕೌಶಲ, ಸಂವಹನ ಕೌಶಲ, ಸಾಹಿತ್ಯ-–ಸಂಸ್ಕೃತಿಗಳ ಜ್ಞಾನವನ್ನು ಪಡೆಯುವುದು ವರ್ತಮಾನದ ಅಗತ್ಯವಾಗಿದೆ. ಹಿಂದಿನಿಂದಲೂ ಸಮಸ್ಯೆಯಾ­ಗಿರುವ ಈ ವಿಷಯವನ್ನು ಕುಲಪತಿ  ಡಾ. ಎಚ್.ಬಿ. ವಾಲೀಕಾರ ಅವರ ಗಮನಕ್ಕೆ ತಂದಾಗ ಕನ್ನಡ ಅಧ್ಯಾಪಕರ ಪರಿಷತ್ತಿನ ಸಮಾ­ವೇಶ­ದಲ್ಲಿ ೨೦೧೩–-೧೪ನೇ ಸಾಲಿನಿಂದಲೇ ಬಿ.ಕಾಂ. ಎರ­ಡನೇ ವರ್ಷದ ತರಗತಿಗೆ ಕನ್ನಡವನ್ನು ಜಾರಿಗೆ ತರುವುದಾಗಿ ಘೋಷಿಸಿದ್ದರು. ಘೋಷ­ಣೆ ಮಾಡಿ ಒಂದೂವರೆ ವರ್ಷ ಕಳೆದಿದೆ.  ಕನ್ನಡ ಪರವಾದ ಈ ಕೆಲಸವನ್ನು ಈ ಶೈಕ್ಷಣಿಕ  ವರ್ಷದಿಂದಲೇ ಜಾರಿಗೊಳಿಸುವಂತಾಗಲಿ.

– ಡಾ. ಜಿ.ಎಂ. ಹೆಗಡೆ, ಡಾ.ಡಿ.ಎಂ.ಹಿರೇಮಠ, ಶಂಕರ ಹಲಗತ್ತಿ, ಡಾ.ಎಂ.ಡಿ.ಒಕ್ಕುಂದ, ಡಾ. ಜಿನದತ್ತ ಹಡಗಲಿ, ಡಾ. ಬಿ.ಜಿ. ಬಿರಾದಾರ, ಡಾ. ಎಸ್.ವಿ. ಮನಗುಂಡಿ, ಡಾ. ವಿನಯಾ ಒಕ್ಕುಂದ, ಡಾ. ವಿಜಯಶ್ರೀ ಹಿರೇಮಠ, ಡಾ. ರೇಖಾ ಜೋಗುಳ, ಡಾ. ಮಾಲತಿ ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.