ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಯಾವ ಪಕ್ಷವೂ ಮಹಿಳೆಯರಿಗೆ ಪ್ರಾಶಸ್ತ್ಯ ನೀಡದಿರುವುದು ಬೇಸರದ ಸಂಗತಿ. ಈ ವಿಷಯವಾಗಿ ಸಂಘಟನೆಗಳಾಗಲೀ, ವ್ಯಕ್ತಿಗಳಾಗಲೀ, ವಿಚಾರವಾದಿಗಳಾಗಲೀ ಧ್ವನಿ ಎತ್ತದಿರುವುದು ವಿಷಾದನೀಯ. ವಿಧಾನಸಭೆಗೆ ಮತ್ತು ಸಂಸತ್ತಿಗೆ ಆರಿಸಿಬಂದಿರುವ ಮಹಿಳೆಯರು ಕೂಡ ಈ ನಿಟ್ಟಿನಲ್ಲಿ ಒತ್ತಡ ಹೇರುತ್ತಿಲ್ಲ ಎಂಬುದು ಸೋಜಿಗದ ಸಂಗತಿ.
ಒಬ್ಬ ಭ್ರಷ್ಟ ರಾಜಕಾರಣಿಗೆ ಟಿಕೆಟ್ ಸಿಗಲಿಲ್ಲ ಎಂದು ಪ್ರತಿಭಟನೆ ಮಾಡುವ ಕಾರ್ಯಕರ್ತರು, ಮಹಿಳೆಯರಿಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಏಕೆ ಬೀದಿಗೆ ಇಳಿಯುವುದಿಲ್ಲ? ಮಹಿಳೆ ಎಲ್ಲಾ ರಂಗಗಳಲ್ಲೂ ಪುರುಷನಿಗೆ ಸರಿಸಮವಾಗಿ ಬೆಳೆಯುತ್ತಿದ್ದಾಳೆ ಎಂದು ಹೊಗಳಿಕೆಯ ಮಾತು ಆಡುತ್ತೇವೆ. ಅದೇ ವೇಳೆ ಶಾಸನಸಭೆಗಳಿಂದ ದೂರ ಇಡುವ ಹುನ್ನಾರ ಮಾಡುತ್ತೇವೆ. ಈ ಸ್ಥಿತಿ ಬದಲಾಗಬೇಕು. ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಬೇಕು.
ಸೋಮಶೇಖರ ಯು.ಟಿ., ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.