ವಾಚಕರವಾಣಿಯಲ್ಲಿ ಪ್ರಕಟವಾದ (‘ಏನಿದೆ ನೈತಿಕ ಬಲ?’; ಸೆ. 16) ಎಸ್. ಮಂಜುನಾಥ ಅವರ ಪತ್ರಕ್ಕೆ ನನ್ನ ಪ್ರತಿಕ್ರಿಯೆ.
ನಾನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ ೨೦೧೦ರಿಂದ ೨೦೧೪ರವರೆಗೆ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದೇನೆ. ನನ್ನ ಕಾಲಾವಧಿಯಲ್ಲಿ ಪೌರೋಹಿತ್ಯ ವೃತ್ತಿಗೆ ಸಂಬಂಧಿಸಿದ ಪಠ್ಯಕ್ರಮವನ್ನಾಗಲೀ, ಪಠ್ಯವನ್ನಾಗಲೀ ಸಿದ್ಧಪಡಿಸಿರುವುದಿಲ್ಲ. ನನ್ನ ಅವಧಿಯಲ್ಲಿ ಸಂಸ್ಕೃತ ಭಾಷೆ ಬೆಳವಣಿಗೆಯ ದೃಷ್ಟಿಕೋನದಿಂದ, ಸಮಾಜಮುಖಿ ಹಾಗೂ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವ ಕಾರ್ಯ ಯೋಜನೆಗಳನ್ನು ಹಾಕಿಕೊಂಡು ನಿರ್ವಹಿಸಲಾಗಿದೆ.
ಸೆ. ೧೪ರಂದು ನಡೆದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಹಲವಾರು ವಿಚಾರಗಳನ್ನು ಸಾಮಾಜಿಕ ಹಾಗೂ ಮಾನವೀಯ ನೆಲೆಯಲ್ಲಿ ಪ್ರಸ್ತಾಪಿಸಿದ್ದೇನೆ. ದೃಶ್ಯಮಾಧ್ಯಮ ತನ್ನ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬೇಕೆಂಬುದನ್ನು ನನ್ನ ಜ್ಞಾನದ ಪರಿಮಿತಿಯೊಳಗೆ ಸೂಚ್ಯವಾಗಿ ಭಾಷಣದಲ್ಲಿ ಪ್ರಸ್ತಾಪಿಸಿದ್ದೇನೆ. ಎಲ್ಲಾ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಸರ್ವತಂತ್ರ ಸ್ವತಂತ್ರನಲ್ಲ.
ಕರ್ನಾಟಕ ದಲಿತ ಪ್ರಾಧಿಕಾರ ಸ್ಥಾಪಿಸಬೇಕೆಂಬ ಹಕ್ಕೊತ್ತಾಯ ಮಾಡಿರುವುದು ನಿಜ. ಆದರೆ, ಅದರ ಅಧ್ಯಕ್ಷನಾಗಬೇಕೆಂಬ ಹಂಬಲ ಎಂದಿಗೂ ಇಲ್ಲ. ಇಂಥ ತಪ್ಪು ಗ್ರಹಿಕೆಗಳನ್ನು ಹೇಳಿಕೆಯ ರೂಪದಲ್ಲಿ ಪತ್ರ ಬರೆದಿರುವ ಮಂಜುನಾಥರ ಬಗೆಗೆ ನನ್ನ ಅನುಕಂಪವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.