ಭಿಕ್ಷುಕಿಯೊಬ್ಬರು ದೇವಸ್ಥಾನಕ್ಕೆ ₹ 2 ಲಕ್ಷ ದೇಣಿಗೆ ನೀಡಿದ ಸುದ್ದಿ (ಪ್ರ.ವಾ., ನ. 22) ಓದಿ ಆಶ್ಚರ್ಯ, ಆತಂಕವಾಯಿತು.
ದೇವಾಲಯಗಳ ಹುಂಡಿ ಮತ್ತು ಬೆಲೆಬಾಳುವ ವಿಗ್ರಹಗಳನ್ನೇ ದೋಚುವ ಇಂದಿನ ಸಂದರ್ಭದಲ್ಲಿ, ಭಿಕ್ಷೆ ಬೇಡಿ ಬಂದ ಹಣವನ್ನು ದೇಣಿಗೆ ನೀಡಿದ ಹಿರಿಯ ಜೀವ ಸೀತಾಲಕ್ಷ್ಮಿಯವರು ನಿಜಕ್ಕೂ ಧೈರ್ಯಲಕ್ಷ್ಮಿ. ಇದು ಅಚ್ಚರಿಗೆ ಕಾರಣವಾದರೆ, ನಮ್ಮಲ್ಲಿ ಈಗಲೂ ಭಿಕ್ಷೆ ಬೇಡುವ ಸ್ಥಿತಿ ಇದೆಯಲ್ಲಾ ಎಂಬುದು ನೋವು ಮತ್ತು ಆತಂಕಕ್ಕೆ ಕಾರಣ.
ಸೀತಾಲಕ್ಷ್ಮಿ ಅವರ ದೇಹಸ್ಥಿತಿ ಹಾಗೂ ವಯಸ್ಸನ್ನು ಪರಿಗಣಿಸಿ ದೇವಸ್ಥಾನದ ಧರ್ಮದರ್ಶಿಗಳು ಅವರಿಗೊಂದು ಕೆಲಸ ಕೊಟ್ಟು, ಒಂದಿಷ್ಟು ಸಂಭಾವನೆಯನ್ನೂ ನೀಡಬಹುದಿತ್ತೇನೊ? ಅವರು ಕೊಟ್ಟಿರುವ ಒಟ್ಟು ₹ 2.50ಲಕ್ಷ ದೇಣಿಗೆಯನ್ನು ಆಡಳಿತ ಮಂಡಳಿ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿದೆ. ನಮ್ಮ ದೇಶವನ್ನು ಕಾಡುತ್ತಿರುವ ಸಾಮಾಜಿಕ ಸಮಸ್ಯೆಗಳಲ್ಲಿ ಬಡತನವೂ ಒಂದು. ಅದೆಷ್ಟೋ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಶುಲ್ಕದ ಹಣ ಒದಗಿಸಲಾದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ದೇಣಿಗೆಯ ಹಣಕ್ಕೆ ಬರುವ ಬಡ್ಡಿಯನ್ನು ಅಂತಹ ಮಕ್ಕಳ ಭವಿಷ್ಯದ ಹಿತಕ್ಕಾಗಿ ಬಳಸಿದರೆ ದೇಣಿಗೆ ಸಾರ್ಥಕವಾಗುವುದು.
–ಎಂ.ಜೆ.ರುದ್ರಮೂರ್ತಿ, ಚಿತ್ರದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.