ಇದೇ 24ರಿಂದ 26ರ ವರೆಗೆ ಮೈಸೂರಿನಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅನುವಾದ ಸಾಹಿತ್ಯಕ್ಕೆ ಅದ್ಯತೆ ಇಲ್ಲದಿರುವ ಬಗ್ಗೆ ಡಾ. ತಿಪ್ಪೇಸ್ವಾಮಿಯವರು ‘ಅನುವಾದ ಮೈಲಿಗೆಯೇ’ ಎಂದು (ವಾ.ವಾ., ನ. 18) ಪ್ರಶ್ನಿಸಿರುವುದು ಸಮಯೋಚಿತ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಶೀರ್ಷಿಕೆಯಲ್ಲಿಯೇ ಅನುವಾದದ ಮಹತ್ವ ಎದ್ದು ಕಾಣುತ್ತದೆ. ಅಖಿಲ ಭಾರತ ಮಟ್ಟದಲ್ಲಿ ಕನ್ನಡವನ್ನು ಅನುಸಂಧಾನಿಸಬೇಕಾದರೆ ಅನುವಾದವೆಂಬ ಮಾರ್ಗದ ಆಶ್ರಯ ಪಡೆದೇ ತೀರಬೇಕಲ್ಲವೇ?
ಭಾರತದ ಇತರ ಭಾಷೆಗಳಿಗೆ ಕನ್ನಡ ಸಾಹಿತ್ಯ ಹಾಗೂ ಸಾಹಿತಿಗಳನ್ನು ಪರಿಚಯಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಹಿಂದೆಂದಿಗಿಂತಲೂ ಇಂದು ಅನುವಾದ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಬಂದಿದೆ. ರಾಷ್ಟ್ರೀಯ ಕಲ್ಪನೆಗೆ ಈ ಅನುವಾದ ಕಾರ್ಯ ಪೂರಕ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ‘ಅನುವಾದ ಸಾಹಿತ್ಯ’ಕ್ಕೆ ಸ್ಥಾನ ಒದಗಿಸಬೇಕಾದ ಅವಶ್ಯಕತೆ ಇತ್ತು.
ಈ ಸಾಹಿತ್ಯ ಸಮ್ಮೇಳನದಲ್ಲಿ ಅನುವಾದ ಪ್ರಕ್ರಿಯೆಗೆ ಆದ್ಯತೆ ಕುರಿತಂತೆ ಮಾತನಾಡಲು ಕಾಲ ಮಿಂಚಿದೆ, ಇರಲಿ. ಮುಂದೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಲೇ ಕನಿಷ್ಠ ಮೂರು ವರ್ಷಗಳಿಗೊಮ್ಮೆ ‘ಅನುವಾದ ಸಾಹಿತ್ಯ ಸಮ್ಮೇಳನ’ ಎಂದೇ ಪ್ರತ್ಯೇಕ ಸಮ್ಮೇಳನ ನಡೆಸಬೇಕು. ಹಾಗಾದಾಗ ಅನುವಾದ ಪ್ರಕ್ರಿಯೆಗೂ ಆದ್ಯತೆ ದೊರೆಯುತ್ತದೆ. ಸಾಹಿತ್ಯ ಪರಿಷತ್ತಿನ ಘನತೆಗೂ ಒಂದು ಗರಿ ಮೂಡುತ್ತದೆ
–ಡಾ.ಎಚ್.ಎಂ. ಕುಮಾರಸ್ವಾಮಿ, ಮೈಸೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.