ADVERTISEMENT

ಸ್ವಾಮೀಜಿ ಬದ್ಧವಾಗಿರಲಿ

ರಮಾನಂದ ಶರ್ಮಾ, ಬೆಂಗಳೂರು
Published 25 ನವೆಂಬರ್ 2015, 19:46 IST
Last Updated 25 ನವೆಂಬರ್ 2015, 19:46 IST

ಒಬ್ಬರು ಸ್ವಾಮಿ ಕೊಲೆ ಆಪಾದನೆಗೆ ಸಿಲುಕಿ, ವರ್ಷಗಳ ನಂತರ ಅತ್ಯುಚ್ಚ ನ್ಯಾಯಾಲಯದಿಂದ ಬಿಡುಗಡೆಯ ನೆಮ್ಮದಿ ಪಡೆದಿದ್ದಾರೆ. ಇನ್ನೊಬ್ಬರು ಸ್ವಾಮಿ  ಕ್ರಿಮಿನಲ್ ಆರೋಪ ಹೊತ್ತು ಪೊಲೀಸ್‌ ಠಾಣೆಗೆ ಅಡ್ಡಾಡುತ್ತಿದ್ದಾರೆ. ಒಂದು ಮಠದಲ್ಲಿ ಸ್ವಾಮಿಗಳ ಪೀಠ ತ್ಯಾಗ ಮತ್ತು ಹೊಸ ಸ್ವಾಮಿಗಳ ನೇಮಕಾತಿ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಅವರು ತಿಂಗಳುಗಳ ಸುದೀರ್ಘ ಸಂಧಾನದ ನಂತರ ಹಿಂತಿರುಗಿ ಬಂದಿದ್ದಾರೆ.

ಹಾಗೆಯೇ ಒಬ್ಬರು ಸ್ವಾಮಿ ಇನ್ನೊಬ್ಬರನ್ನು ದೇವದೂತರಲ್ಲ ಎಂದು ಹೇಳುವುದು, ಇನ್ನೊಬ್ಬರು, ಧರ್ಮವನ್ನು ಅಲಕ್ಷಿಸಿ ತಮ್ಮ ಪಂಥದ ದೀಕ್ಷೆ ಕೊಡುವುದಾಗಿ ಹೇಳಿರುವುದು ಹಿಂದೂ ಧರ್ಮವನ್ನು ನಂಬಿಕೊಂಡು ಬಂದವರಿಗೆ ಮುಜುಗರ ಉಂಟು ಮಾಡುತ್ತಿದೆ. ಯಾವುದೇ ಮಠ ಅಥವಾ ಪೀಠವಿರಲಿ ಯಾವುದಾದರೂ ಗೊಂದಲದಲ್ಲಿ, ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡಿರುವುದನ್ನು ಅಥವಾ ನ್ಯಾಯಾಲಯದ ಮೊರೆ ಹೋಗಿರುವುದನ್ನು ನೋಡುತ್ತೇವೆ.

ಒಂದು ಕಾಲದಲ್ಲಿ ಸ್ವಾಮಿಗಳೇ ಸ್ವತಃ ಭಕ್ತರ ಮಧ್ಯದ ವೈಮನಸ್ಸುಗಳಿಗೆ ನ್ಯಾಯದಾನ ಮಾಡುತ್ತಿದ್ದ ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ. ವಿಷಾದವೆಂದರೆ, ಈಗ ನ್ಯಾಯಕ್ಕಾಗಿ ಕೆಲವು ಸ್ವಾಮಿಗಳು ಭಕ್ತರ, ರಾಜಕಾರಣಿಗಳ ಅಥವಾ ನ್ಯಾಯಾಲಯದ ಮೊರೆ ಹೋಗುವುದನ್ನು ನೋಡಬೇಕಾಗಿದೆ.

ಸಾವಿರಾರು ವರ್ಷಗಳಷ್ಟು ಹಳೆಯದಾದ ಹಿಂದೂ ಧರ್ಮವನ್ನು ರಕ್ಷಿಸುವ,   ಉಳಿಸುವ, ಪಸರಿಸುವ ಮತ್ತು  ಜನ ಸಜ್ಜನರಾಗಿ ಧರ್ಮದ ತಳಹದಿಯಲ್ಲಿ  ಬದುಕುವಂತೆ ನಿಗಾ ಇಡುವ ಮಹತ್ತರ ಜವಾಬ್ದಾರಿ ಧರ್ಮ ಪೀಠಗಳು ಮತ್ತು ಸ್ವಾಮಿಗಳ ಮೇಲೆ ಇದೆ. ಇವರ ಕಾರ್ಯವೈಖರಿಯಲ್ಲಿ ಕಿಂಚಿತ್ ಲೋಪವಾದರೂ ಅದು ಇಡೀ ಹಿಂದೂ ಸಮಾಜಕ್ಕೆ ಮತ್ತು ಧರ್ಮಕ್ಕೆ ಆದ ಗಾಯವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸ್ವಾಮಿಗಳು ಕಾರ್ಯ ನಿರ್ವಹಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ತಮ್ಮ ಸ್ಥಾನದ ಬದ್ಧತೆಯನ್ನು ಚೆನ್ನಾಗಿ ಅರಿತುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.