ADVERTISEMENT

‘ಚುನಾವಣಾ ಪೂರ್ವ ಸಮೀಕ್ಷೆ ಸಲ್ಲ’

ಕೆ.ಟಿ.ತಿಮ್ಮಾರೆಡ್ಡಿ
Published 20 ಏಪ್ರಿಲ್ 2014, 19:30 IST
Last Updated 20 ಏಪ್ರಿಲ್ 2014, 19:30 IST

ಚುನಾವಣಾ ಪೂರ್ವ ಸಮೀಕ್ಷೆಗಳಿಗೆ– ಮತದಾನಕ್ಕೆ ಮುನ್ನ 48 ಗಂಟೆಗಳನ್ನು ಹೊರತುಪಡಿಸಿ– ನಿಷೇಧ ಹೇರಲು ಸದ್ಯದ ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಹಾಗಾಗಿ ಕಾರ್ಪೊರೇಟ್ ವಲಯದ ಪ್ರಭಾವ ಹಾಗೂ ಸಂಸ್ಥೆ–ವ್ಯಕ್ತಿಗಳ ‘ಒಲವು–ನಿಲುವು’ಗಳನ್ನು ಆಧರಿಸಿ ವಿವಿಧ ರೀತಿಯ ಸಮೀಕ್ಷೆಗಳು ಹೊರಬೀಳುತ್ತಿವೆ.

ಇಂತಹ ಸಮೀಕ್ಷೆಗಳು ಗ್ರಾಮೀಣ ಹಾಗೂ ನಗರ ಮತದಾರರ ಮೇಲೆ ಪ್ರಭಾವ ಬೀರುವುದರಲ್ಲಿ ಎರಡು ಮಾತಿಲ್ಲ. ಟಿ.ವಿ. ವಾಹಿನಿ­ಗಳು ಎಸ್‌.ಎಮ್‌.ಎಸ್‌, ‘ಫೋನ್‌ ಮಾಡಿ, ವೋಟ್‌ ಮಾಡಿ’ ಹಾಗೂ ‘ಮನೆ ಮನೆ ಮತದಾನ’ಗಳಂತಹ ವಿಧಾನಗಳ ಮೂಲಕ ಮಾಹಿತಿ ಸಂಗ್ರಹಿಸಿ ರಾಜ್ಯದಲ್ಲಿ ಪ್ರಸಾರ ಮಾಡಿವೆ.  ಬೇರೆ ಭಾಷೆಯ ವಾಹಿನಿಗಳೂ ಈ ಬಗೆಯ ಬೇರೆ ಬೇರೆ ತಂತ್ರ­ಗಳನ್ನು ಬಳಸುತ್ತಿವೆ. ‘ಕೃತಕ’ ಬಹುಮತ ಬರುವಂತೆ ತಂತ್ರಗಾರಿಕೆ ಹೆಣೆಯುವುದು ಇಲ್ಲಿ ಸಾಧ್ಯವಿರುತ್ತದೆ. ಮತ ಗಳಿಕೆ ಪ್ರಮಾ­ಣದ ಸಾಧ್ಯತೆ ಕುರಿತು ತಪ್ಪು ಸಂದೇಶ ಮತದಾರರಿಗೆ ನೀಡುತ್ತದೆ.

ಗೆಲ್ಲುವ ಅಭ್ಯರ್ಥಿಗೆ ಮತ ಹಾಕೋಣ. ಸೋಲುವ ಅಭ್ಯರ್ಥಿಗೆ ಮತ ಹಾಕಿ ವ್ಯರ್ಥ ಮಾಡಿಕೊಳ್ಳುವುದೇಕೆ ಎಂಬ ಮನೋಭಾವ ಮತದಾರರಲ್ಲಿ  ಬಲಗೊಳ್ಳಲು ಇವು ಸಹಕಾರಿ ಆಗಲಿವೆ. ಈ ಕಾರಣ,ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಪ್ರಕಟಿಸುವ ಬಗ್ಗೆ ಮಾಧ್ಯಮಗಳು ಅದರಲ್ಲೂ ದೃಶ್ಯ ಮಾಧ್ಯಮಗಳು ಸ್ವಯಂ ನಿಯಂತ್ರಣ ಹೇರಿಕೊಳ್ಳುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.