ವಿಜಯಪುರ: ‘ಖಾಸಗಿ ಸಾಲೀಲಿ ಕಲಿತವರೆಲ್ಲ ಜಾಣರಾಗ್ತಾರಾ ಎಂಬ ಭ್ರಮೆಯೇ ಇದೀಗ ಎಲ್ಲೆಲ್ಲೂ. ಆದ್ರಾ ನಾ ನಿಮ್ಗ ಖರೇ ಹೇಳ್ತೀನಿ ಕೇಳ್ರೀ. ಖಾಸಗಿ ಸಾಲಿಗೆ ಹೋದ ಎಲ್ರೂ ಜಾಣರಲ್ಲ. ಸರ್ಕಾರಿ ಸಾಲೀಲಿ ಕಲ್ತವರು ದಡ್ಡರಲ್ಲ. ಇದಕ್ಕ ನಾನೇ ನೈಜ ನಿದರ್ಶನ...
ನಾ ಖಾಸಗಿ ಸಾಲೀಲಿ ಕಲ್ತಾವ. ಆದ್ರೇ ಯಾಡ್ ಬಾರಿ ಫೇಲಾದೆ. ನನ್ನ ಓರಗೆಯವರು ಸರ್ಕಾರಿ ಸಾಲಿಗೆ ಹೋಗ್ತಿದ್ದರು. ಅದರಲ್ಲಿ ಕೆಲವರಿಂದು ಅಮೆರಿಕ, ಜಪಾನ್ನಲ್ಲಿದ್ದಾರ. ಇದನ್ನ ನೆನ್ಪಿಡಿ..’
ವಿಜಯಪುರದಲ್ಲಿ ಈಚೆಗೆ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಮ್ಮ ಮಾತಿನ ನಡುವೆ, ಸರ್ಕಾರಿ ಶಾಲೆಗಳ ಬಗ್ಗೆ ವ್ಯಕ್ತವಾಗುತ್ತಿರುವ ಕೀಳರಿಮೆ ಹೋಗಲಾಡಿಸಲು ತಮ್ಮ ಕತೆಯನ್ನೇ ಶಿಕ್ಷಕ ಸಮೂಹಕ್ಕೆ ಹೇಳುತ್ತಿದ್ದಂತೆ ಕಿಕ್ಕಿರಿದು ತುಂಬಿದ್ದ ಸಭಾಂಗಣ ನಗೆಗಡಲಲ್ಲಿ ತೇಲಿತು.
‘ನಂಗ ಸರ್ಕಾರಿ ಸಾಲೀ ಮೇಲೆ ಭಾರಿ ಪ್ರೀತಿ. ಇಲ್ಲಿನ ಶಿಕ್ಷಕರನ್ನು ಶೈಕ್ಷಣಿಕವಾಗಿ ಸುಧಾರಿಸಿದರೆ, ಇಡೀ ವ್ಯವಸ್ಥೆಯೇ ಬದಲಾಗುತ್ತೆ ಅಂತ ಪರೀಕ್ಷೆ ಆಯೋಜಿಸಲು ಮುಂದಾದೆ. ಆದ್ರೆ ಭಾಳ ಶ್ಯಾಣೆಯಿರುವ ನೀವೂ ಎಲ್ಲಿ ತಮ್ಮ ಬಂಡವಾಳ ಬೀದಿಗೆ ಬಂದು ನಗೆಪಾಟಲಿಗೀಡಾಗ್ತ್ವೀ ಎಂದು ನಮ್ಗ ಅಂಜಿಸಿದ್ರೀ.
ನನ್ಗೂ ವಿಧಿಯಿಲ್ಲದೆ ವೋಟಿನಾಸೆಗೆ ಮಹತ್ವದ ಆಶಯವನ್ನೇ ಕೈಬಿಟ್ಟೆ. ಅದ್ಕ ನೀವೆಲ್ಲಾ ನಮ್ ಸಚಿವರಂತ ಸಚಿವ್ರೇ ಇಲ್ಲ ಅಂತ ಹೊಗಳಾಕ ಆರಂಭಿಸಿದ್ದೀರಿ’ ಎಂದು ಸಚಿವ ಎಂ.ಬಿ.ಪಾಟೀಲ ಪರೋಕ್ಷವಾಗಿ ಶಿಕ್ಷಕ ಸಮೂಹಕ್ಕೆ ಟಾಂಗ್ ನೀಡಿದರು. ಸಮಾರಂಭದಲ್ಲಿ ಹಾಜರಿದ್ದವರ ಮೊಗದಲ್ಲಿ ಮಂದಹಾಸ ಮಿಂಚಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.