ADVERTISEMENT

ನಿಮ್ಮಷ್ಟು ರಾಜಕೀಯ ಮಾತಾಡೋರಿಲ್ಲ!

ನಾಗರಾಜ ಚಿನಗುಂಡಿ
Published 6 ಮೇ 2017, 19:30 IST
Last Updated 6 ಮೇ 2017, 19:30 IST
ರಾಯಚೂರು: ‘ಸವಿತಾ ಸಮಾಜದವರಷ್ಟು ಸ್ವಾಭಿಮಾನಿಗಳಿಲ್ಲ. ನಿಮ್ಮಷ್ಟು ರಾಜಕೀಯ ಮಾತಾಡೋರಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಅವರು ಹೇಳಿದ ಮಾತಿಗೆ ಸವಿತಾ ಸಮಾಜದ ಜನರು ಚಪ್ಪಾಳೆ ತಟ್ಟಿ ಶಿಳ್ಳೆ ಹೊಡೆದರು.
 
‘ಈ ವರ್ಷ ಯಾವ ಪಕ್ಷ ಗೆಲ್ಲುತ್ತದೆ, ಯಾರು ಗೆಲ್ಲುತ್ತಾರೆ ಎಂಬಂಥ ವಿಚಾರಗಳನ್ನು ನೀವು ಕೂದಲು ಕತ್ತರಿಸುತ್ತಲೇ ವಿಮರ್ಶೆ ಮಾಡಿ ಮುಗಿಸುತ್ತೀರಿ. ನಿಮಗಿರುವಷ್ಟು ರಾಜಕೀಯ ಜ್ಞಾನ ಬೇರೆಯವರಿಗೆ ಇಲ್ಲ. ಪ್ರಧಾನಿಯಾಗಿರಲಿ, ರಾಷ್ಟ್ರಪತಿಯಾಗಿರಲಿ ಎಲ್ಲರೂ ನಿಮ್ಮ ಮುಂದೆ ತಲೆ ತಗ್ಗಿಸಲೇ ಬೇಕು’ ಎಂದಾಗ ಚಪ್ಪಾಳೆ ಇನ್ನೂ ಜೋರಾಯಿತು.
 
‘ಸವಿತಾ ಸಮಾಜದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ನಿಮ್ಮ ಮನೆಯ ಮಹಿಳೆಯರನ್ನು ಕರೆದುಕೊಂಡು ಬರಬೇಕು. ಮುಂದಿನ ವರ್ಷ ನೀವು ಕರೆಯದಿದ್ದರೂ ನಾನು ಬರುತ್ತೇನೆ. ನಿಮ್ಮ ಮನೆಯವರೆಲ್ಲಿದ್ದಾರೆ ಎಂದು ಕೇಳಿದಾಗ ಪ್ರತಿಯೊಬ್ಬರೂ ಎದ್ದು ಹೇಳಬೇಕು. ನಾನು ಕೇಳುತ್ತೇನೆ ಎಂದು ಬೇರೆ ಮಹಿಳೆಯರನ್ನು ಕರೆದುಕೊಂಡು ಬರಬೇಡಿ’ ಎಂದಾಗ ಸಭೆಯಲ್ಲಿ ನಗೆ ಉಕ್ಕಿತು.
 
‘ಮದುವೆ ಆಗದೇ ಇದ್ದವರು ಒಬ್ಬೊಬ್ಬರಾಗಿ ಬಂದರೂ ಪರವಾಗಿಲ್ಲ. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರನ್ನು ನಿರ್ಲಕ್ಷಿಸಬೇಡಿ. ಅವರಿಗೂ ಸಮಾನ ಅವಕಾಶ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು. ಜಿಲ್ಲಾ ಸವಿತಾ ಸಮಾಜವು ನಗರದ ಶಂಖಚಕ್ರ ಮಾರುತಿ ದೇವಸ್ಥಾನದ ಸಭಾ ಭವನದಲ್ಲಿ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.