ADVERTISEMENT

ನಿವೃತ್ತಿ ದಿನ ಅಪರಾಧ ನಡೆಯಲೇ ಇಲ್ಲ!

ವಾರೆಗಣ್ಣು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2017, 19:30 IST
Last Updated 5 ಆಗಸ್ಟ್ 2017, 19:30 IST

ಹುಬ್ಬಳ್ಳಿ: ಇತ್ತೀಚೆಗೆ ನಿವೃತ್ತರಾದ ಹುಬ್ಬಳ್ಳಿ– ಧಾರವಾಡ ಪೊಲೀಸ್‌ ಕಮಿಷನರ್‌ ಪಾಂಡುರಂಗ ರಾಣೆ ಅವರಿಗೆ ನಿವೃತ್ತಿಯ ಹಿಂದಿನ ದಿನ ಹಾಗೂ ನಿವೃತ್ತಿ ದಿನ ಯಾವುದೇ ಅಪರಾಧ ಕೃತ್ಯಗಳು ನಡೆಯುವುದು ಇಷ್ಟವಿರಲಿಲ್ಲವೇನೋ.

ಹಾಗಾಗಿ, ಎರಡು ದಿನಗಳವರೆಗೆ ಯಾವುದೇ ಅಪರಾಧ ಕೃತ್ಯಗಳು ನಡೆದ ಬಗೆಗೆ ಕಮಿಷನರ್‌ ಕಚೇರಿಯಿಂದ ಪತ್ರಿಕಾ ಕಚೇರಿಗೆ ಸುದ್ದಿಗಳೇ ಬರಲಿಲ್ಲ.

ಅಪರಾಧ ಘಟನೆಗಳು ನಡೆಯಲಿಲ್ಲವೋ, ನಡೆದರೂ ಅವುಗಳನ್ನು ಮಾಧ್ಯಮಗಳಿಗೆ ತಲುಪಿಸದಂತೆ ಸೂಚನೆ ಇತ್ತೋ ಎಂಬ ಬಗ್ಗೆ ಇನ್ನೂ ಜಿಜ್ಞಾಸೆ ಇದೆ. ಈ ಸಂಬಂಧ ಪತ್ರಕರ್ತರೊಬ್ಬರು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಕೇಳಿದಾಗ ಇನ್ನೆರಡು ದಿನಗಳಲ್ಲಿ ಮಾಹಿತಿ ಕೊಡುವೆ ಎಂದು ಮೆಲ್ಲಗೆ ಫೋನಿಟ್ಟರು.

ADVERTISEMENT

ಕೊಲೆ, ಕಳ್ಳತನದಂತಹ ಘಟನೆಗಳು ನಡೆಯದಿದ್ದರೂ ಎಷ್ಟೋ ಬಾರಿ ರಸ್ತೆ ನಿಯಮ ಉಲ್ಲಂಘನೆಗಾಗಿ ವಿಧಿಸಿದ ದಂಡದ ಮೊತ್ತದ ವಿವರವಾದರೂ ಪತ್ರಿಕಾ ಕಚೇರಿಗೆ ತಲುಪುತ್ತಿತ್ತು. ಆದರೆ, ನಿವೃತ್ತಿ ಹಿಂದಿನ ದಿನ ಹಾಗೂ ನಿವೃತ್ತಿ ದಿನ ಆ ಸುದ್ದಿಯೂ ಬರಲಿಲ್ಲ!

ಆ ಎರಡು ದಿನ ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಯಾವ ಪೊಲೀಸ್‌ ಠಾಣೆಯಲ್ಲಿಯೂ ಎಫ್‌ಐಆರ್‌ ದಾಖಲಾಗಲೇ ಇಲ್ಲವೇ ಎಂದು ತಲೆ ಕೆರೆದುಕೊಳ್ಳುವ ಸರದಿ ಪತ್ರಕರ್ತರದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.