ವಿಜಯಪುರ:‘ನಮ್ ಜಿಲ್ಲೆಯಲ್ಲಿ ತ್ರಾಸಿಲ್ಲದೆ ಅಧಿಕಾರವನ್ನು ಪಡೆದು ಬಂದು ಪುಣ್ಯಾತ್ಮನಂತೆ ಅನುಭವಿಸುತ್ತಿರೋ ಏಕೈಕ ರಾಜಕಾರಣಿ ಅಂದ್ರೇ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾತ್ರ..!’
‘ಈ ಪುಣ್ಯಾತ್ಮ ರಾಜಕೀಯ ಪ್ರವೇಶಿಸಿದ ಆರಂಭದಿಂದಲೂ ಎಲ್ಲ ಅಧಿಕಾರ ಅನುಭವಿಸಿದ. ಚಿಕ್ಕ ವಯಸ್ಸಿನಲ್ಲೇ ರಾಜ್ಯ ಸರ್ಕಾರದಲ್ಲಿ ಸಚಿವನಾಗಿದ್ದ. ಆಗಿನಿಂದಲೂ ಅಧಿಕಾರ ಎಂಬೋದು ಈತನ ಸುತ್ತಲೇ ಗಿರಕಿ ಹಾಕ್ತೈತಿ...’
ವಿಜಯಪುರ ತಾಲ್ಲೂಕಿನ ಬಬಲೇಶ್ವರ ಗ್ರಾಮದಲ್ಲಿ ಈಚೆಗೆ ನಡೆದ ಜನ ಸಂಪರ್ಕ ಅಭಿಯಾನದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಕೇಂದ್ರ ಸಚಿವ ಜಿಗಜಿಣಗಿ ಅವರನ್ನು ಹೊಗಳಿದ ಪರಿಯಿದು.
‘ಈ ಪುಣ್ಯಾತ್ಮ ನಮಗೂ ಸ್ವಲ್ಪ ಆಶೀರ್ವದಿಸಿದರೆ ನಸೀಬು ಬದಲಾಗಬೌದು. ನಾನೂ ಶಾಸಕನಾಗಬೌದು’ ಎಂಬ ಆಸೆ ವ್ಯಕ್ತಪಡಿಸಿದರು.
ಮುಖಂಡನ ಮಾತಿನಿಂದ ಮಂದಸ್ಮಿತರಾಗಿ ಮನದಲ್ಲೇ ಹಿರಿ ಹಿರಿ ಹಿಗ್ಗಿದ್ದ ಜಿಗಜಿಣಗಿ, ಮಾತನಾಡುವ ವೇಳೆ, ನೆರೆದಿದ್ದ ಜನಸಮೂಹವನ್ನುದ್ದೇಶಿಸಿ, ‘ನೀವೆಲ್ಲ ನಮ್ಮ ವಿಜುಗೌಡ ಪಾಟೀಲಣ್ಣಂಗೆ ಆಶೀರ್ವದಿಸಿ, ಆತನನ್ನು ಶಾಸಕನನ್ನಾಗಿ ಆಯ್ಕೆ ಮಾಡಿ’ ಎಂದು ಮನವಿ ಮಾಡುತ್ತಿದ್ದಂತೆ, ಜನಸಮೂಹದಲ್ಲಿ ನಶೆಯಲ್ಲಿದ್ದ ‘ಪರಮಾತ್ಮ’ನೊಬ್ಬನು, ‘ಯಪ್ಪಾ ನೀ ಹೊಂದಾಣ್ಕೆ ಮಾಡ್ಕೊಬ್ಯಾಡ್ವೋ. ಮೊದಲು ನೀ ಆಶೀರ್ವಾದ ಮಾಡಪ್ಪೋ’ ಎಂಬ ಉದ್ಗಾರ ತೆಗೆದ. ಇದನ್ನು ಕೇಳಿ ನೆರೆದಿದ್ದ ಜನಸ್ತೋಮ ನಗೆಗಡಲಲ್ಲಿ ತೇಲಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.