ದೇಶದಲ್ಲಿ ರ್ಯಾಗಿಂಗ್ ತಡೆ ಅಭಿಯಾನಕ್ಕೆ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಅವರನ್ನು ಸಕ್ರಿಯವಾಗಿ ಬಳಸಿಕೊಳ್ಳಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ನ್ಯಾಷನಲ್ ಫಿಲಂ ಡೆವಲಪ್ಮೆಂಟ್ ಕಾರ್ಪೊರೇಷನ್ (ಎನ್ಎಫ್ಡಿಸಿ) ಮುಂದಾಗಿವೆ.
ರ್ಯಾಗಿಂಗ್ ದುಷ್ಪರಿಣಾಮಗಳ ಕುರಿತು ಮತ್ತು ತಡೆಗಟ್ಟಬೇಕಾದ ಅಗತ್ಯ ಕುರಿತು ಈ ಎರಡೂ ಸಂಸ್ಥೆಗಳು ಜತೆಗೂಡಿ ನಿರ್ಮಿಸಲಿರುವ ಕಿರುಚಿತ್ರ, ಜಾಹೀರಾತುಗಳಲ್ಲಿ ಶಿಲ್ಪಾಶೆಟ್ಟಿ ನಟಿಸಲಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ಮತ್ತು ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ ಸಂಬಂಧಿಸಿದಂತೆ 2017ರಲ್ಲಿ ಬಾಲಿವುಡ್ ಪ್ರಸಿದ್ಧ ನಟರಾದ ಅಮಿತಾಭ್ ಬಚ್ಚನ್, ಸಲ್ಮಾನ್ ಖಾನ್ ಜತೆ ಶಿಲ್ಪಾಶೆಟ್ಟಿಯೂ ರಾಯಭಾರಿಯಾಗಿದ್ದರು.
ಈ ಅಭಿಯಾನದ ವಿಡಿಯೊಗಳು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಸಾಕಷ್ಟು ನೆರವಾಗಿದ್ದವು. ಈ ಯಶಸ್ಸನ್ನು ಆಧರಿಸಿ ರ್ಯಾಗಿಂಗ್ ತಡೆಗೆ ಎನ್ಎಫ್ಡಿಸಿ ಚಿಂತಿಸಿತು. ಇದಕ್ಕೆ ಯುಜಿಸಿ ಸಮ್ಮತಿ ನೀಡಿದ್ದು, ಎರಡೂ ಸಂಸ್ಥೆಗಳು ಜಂಟಿಯಾಗಿ ಹೊಸ ಅಭಿಯಾನ ಕೈಗೊಳ್ಳಲಿವೆ.
ರ್ಯಾಗಿಂಗ್ ಪಿಡುಗಿಗೆ ಯಾವೊಬ್ಬ ವಿದ್ಯಾರ್ಥಿಯೂ ಬಲಿಯಾಗಬಾರದು. ಇದರಿಂದ ಯಾರೂ ವ್ಯಾಸಂಗ ತೊರೆಯಬಾರದು. ಈ ಪಿಡುಗನ್ನೇ ನಾಶಪಡಿಸಬೇಕು ಎಂದರೆ, ಅದರ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂಬ ನಿರ್ಧಾರಕ್ಕೆ ಈ ಸಂಸ್ಥೆಗಳು ಬಂದಿವೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನವನ್ನು ಅವು ಕೈಗೊಂಡಿವೆ.
ಶಿಲ್ಪಾ ಶೆಟ್ಟಿ ಯೋಗಪಟು. ಅವರು ಯೂತ್ ಐಕಾನ್ ಸಹ ಹೌದು. ಅವರ ನಟನೆಯ ಜಾಹೀರಾತುಗಳು ಯುವ ಮನಸಿನ ಮೇಲೆ ಪರಿಣಾಮ ಬೀರುತ್ತವೆ. ಸಾಮಾಜಿಕ ಕಾಳಜಿಯ ಈ ಕಿರುಚಿತ್ರಗಳಲ್ಲಿ ಯುವ ಜನರನ್ನು ಸಕಾರಾತ್ಮಕ ಚಿಂತನೆಯತ್ತ ಸೆಳೆಯಲು, ತಮಾಷೆಗಾಗಿಯಾಗಲೀ, ಕಿರುಕುಳಕ್ಕಾಗಲೀ ರ್ಯಾಗಿಂಗ್ ಮಾಡಬಾರದು ಎಂಬ ಸಂದೇಶ ಒಳಗೊಂಡಿರುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.