ಇನ್ನೂ ನೆನಪಿದೆ. ದಾವಣಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಭಾರತ ಸೇವಾದಳದಲ್ಲಿ ಏಳನೇ ತರಗತಿ ಓದುತ್ತಿದ್ದ ನಾವು ಭಾಗವಹಿಸಿದ್ದೆವು. ಆಗ ನಮ್ಮ ಸಮವಸ್ತ್ರ ಗಾಂಧಿ ಟೋಪಿ, ಬಿಳಿ ಅಂಗಿ, ಹಸಿರು ಚಡ್ಡಿ, ಖಾದಿ ಬಟ್ಟೆಯಿಂದ ಸಿದ್ಧಗೊಂಡಿದ್ದವು. ಮೊದಲ ಬಾರಿ ಗರಿ ಗರಿ ಹತ್ತಿ ಬಟ್ಟೆ ತೊಟ್ಟಾಗ ಮನಸ್ಸು ಪುಳಕಗೊಂಡಿತ್ತು.
ನಂತರ ಹೈಸ್ಕೂಲಿನಲ್ಲಿ ಶಿಕ್ಷಕರು ಸ್ವಾತಂತ್ರ್ಯದ ಸಮಯದಲ್ಲಿ ಗಾಂಧೀಜಿಯವರು ಗುಡಿ ಕೈಗಾರಿಕೆಯಲ್ಲಿ ಖಾದಿ ಬಟ್ಟೆಗೆ ನೀಡಿದ ಪ್ರಾಶಸ್ತ್ಯ ಮತ್ತು ಅದರ ಪಾತ್ರವನ್ನು ಮನ ಮುಟ್ಟುವಂತೆ ಬೋಧಿಸಿದ್ದರು. ಆಗಲೇ ನಮಗೆ ಖಾದಿ ಮಹತ್ವ ಅರಿವಾಗಿದ್ದು. ಆನಂತರ ಆಗಾಗ ಅಪ್ಪ ಅಮ್ಮ ಕೊಡಿಸುತ್ತಿದ್ದ ಬಟ್ಟೆಯಲ್ಲಿ ಖಾದಿ ಬಟ್ಟೆಗೂ ಒಂದು ಸ್ಥಾನ ಇದ್ದೇ ಇರುತ್ತಿತ್ತು.
ಏನೇ ಆದರೂ ಖಾದಿ ಬಟ್ಟೆಗೆ ಇಸ್ತ್ರಿ ಬಿದ್ದರೆ ಅದರ ಗತ್ತೇ ಬೇರೆ. ಅದು ಜನರಿಂದ ನೋಡಿಸಿಕೊಳ್ಳುವ ಪರಿಯೇ ಅದ್ಭುತ. ನಂತರದ ದಿನಗಳಲ್ಲಿ ನಾನು ಡಿಎಡ್ ಶಿಕ್ಷಕರ ತರಬೇತಿಗೆ ಹಾಜರಾದಾಗ ನಮ್ಮ ನೆಚ್ಚಿನ ಶರ್ಟ್ಗಳು ಕಾಟನ್ಮಯವಾಗಿದ್ದವು. ಬಹಳಷ್ಟು ಸಹಪಾಠಿಗಳು ‘ಶರ್ಟ್ ಸೂಪರ್ ಗೆಳೆಯ’ ಎಂದು ಮೆಚ್ಚುಗೆ ಸೂಚಿಸುತ್ತಿದ್ದರು. ಸರ್ಕಾರಿ ಕೆಲಸಕ್ಕೆ ಸೇರಿದ ನಂತರ ಕಾಟನ್ ಅವಿಭಾಜ್ಯ ಅಂಗವಾಯಿತು.
ಖಾದಿ ಎಂದರೆ ‘ಮೆಚ್ಚುಗೆ’ ಅನ್ನುವಷ್ಟು ಅನುಭವ ಆಗಿದೆ. ಖಾದಿಗೆ ಕಾಯಕಲ್ಪ ನೀಡುವುದು ಸರಳವಲ್ಲದಿದ್ದರೂ ತುಂಬಾ ಕಷ್ಟವೇನಲ್ಲ. ಇದಕ್ಕೆ ನಮ್ಮ ಯುವ ಜನಾಂಗ ಮನಸ್ಸು ಮಾಡಬೇಕಷ್ಟೆ. ಅದನ್ನು ಹೆಚ್ಚು ಹೆಚ್ಚು ಧರಿಸುವ ಮೂಲಕ ನಮ್ಮದೇ ಸಂಸ್ಕೃತಿಗೆ ಮೆರುಗು ನೀಡಬಹುದು. ಹಾಗೆಯೇ ಸರ್ಕಾರ ಕೂಡ ಖಾದಿ ಬಟ್ಟೆ ತಯಾರಕರಿಗೆ, ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಆಕರ್ಷಣೀಯ ರಿಯಾಯಿತಿಗಳನ್ನು ನೀಡಬೇಕು. ಇದನ್ನು ಬದ್ಧತೆಯಿಂದ ಮಾಡಿದರೆ ಖಾದಿ ಮತ್ತೆ ನಮ್ಮ ಜನರ ದೈನಂದಿನ ಜೀವನದಲ್ಲಿ ಸ್ಥಾನ ಪಡೆಯುವುದರಲ್ಲಿ ಸಂದೇಹವಿಲ್ಲ.
-ರವಿಚಂದ್ರ ಹರ್ತಿಕೋಟೆ ಚಿತ್ರದುರ್ಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.