ಕೌಂಟಾನ್, ಮಲೇಷ್ಯಾ (ಪಿಟಿಐ): ಹಿಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನವನ್ನು ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.
ಮಂಗಳವಾರ ನಡೆಯುವ ರೌಂಡ್ ರಾಬಿನ್ ಲೀಗ್ನ ತನ್ನ ನಾಲ್ಕನೇ ಪಂದ್ಯದಲ್ಲಿ ಪಿ.ಆರ್. ಶ್ರೀಜೇಶ್ ಪಡೆ ಚೀನಾ ತಂಡದ ಸವಾಲಿಗೆ ಎದೆಯೊಡ್ಡಲಿದ್ದು ಜಯದ ಕನವರಿಕೆಯಲ್ಲಿದೆ. ಆರಂಭಿಕ ಪಂದ್ಯದಲ್ಲಿ 10–2 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿದ್ದ ಭಾರತ ತಂಡ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕ್ ತಂಡದ ಸದ್ದಡಗಿಸಿತ್ತು.
ಆಡಿರುವ ಮೂರು ಪಂದ್ಯಗಳಿಂದ ಏಳು ಪಾಯಿಂಟ್ಸ್ ಸಂಗ್ರಹಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿರುವ ಶ್ರೀಜೇಶ್ ಪಡೆ ಚೀನಾ ತಂಡವನ್ನು ಹಣಿದು ಅಗ್ರಸ್ಥಾನಕ್ಕೇರುವ ಗುರಿ ಹೊಂದಿದೆ. ಹಿಂದಿನ ಪಂದ್ಯಗಳಲ್ಲಿ ಮಿಂಚಿರುವ ರಮಣದೀಪ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಪ್ರದೀಪ್ ಮೊರ್, ಜಸ್ಜೀತ್ ಸಿಂಗ್ ಕುಲಾರ ಅವರ ಮೇಲೆ ಅಪಾರ ನಿರೀಕ್ಷೆ ಇಡಲಾಗಿದೆ.
ಕರ್ನಾಟಕದ ಎಸ್.ಕೆ. ಉತ್ತಪ್ಪ, ನಿಕಿನ್ ತಿಮ್ಮಯ್ಯ ಹಾಗೂ ಮಾಜಿ ನಾಯಕ ಸರ್ದಾರ್ ಸಿಂಗ್ ಅವರೂ ಚೀನಾ ತಂಡದ ರಕ್ಷಣಾ ಕೋಟೆಯನ್ನು ಧ್ವಂಸ ಮಾಡಬಲ್ಲ ಸಮರ್ಥರಾಗಿದ್ದಾರೆ. ‘ಪಾಕಿಸ್ತಾನದ ವಿರುದ್ಧ ನಮ್ಮ ಆಟಗಾರರು ತುಂಬಾ ಚೆನ್ನಾಗಿ ಆಡಿದರು. ಮುಂದಿನ ಪಂದ್ಯಗಳಲ್ಲೂ ಇದೇ ಸಾಮರ್ಥ್ಯ ಮುಂದುವರಿಸಿದರೆ ಪ್ರಶಸ್ತಿ ಗೆಲ್ಲುವುದು ಕಷ್ಟವಾಗಲಾರದು’ ಎಂದು ಭಾರತ ತಂಡದ ಮುಖ್ಯ ಕೋಚ್ ರೋಲಂಟ್ ಓಲ್ಟಮಸ್ ನುಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.