ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರತೇಕ ವಿಮಾನ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಭಾರತದ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಮನವಿ ಮಾಡಿದ್ದಾರೆ.
ಆಟಗಾರರು ಸರಣಿಗಳ ನಿಮಿತ್ತ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರವಾಸ ಮಾಡುವ ವೇಳೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಇದರಿಂದ ಆಟಗಾರರಿಗೆ ದಣಿವು ಮತ್ತು ಸಮಯದ ಅಭಾವ ಉಂಟಾಗುತ್ತದೆ. ಇವುಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಹೊಸ ಯೋಜನೆಗಳ ಕುರಿತು ಸೂಚನೆ ನೀಡಿದ್ದಾರೆ.
ಸದ್ಯ ಬಿಸಿಸಿಐ ವಿಶ್ವದಲ್ಲಿಯೇ ಹೆಚ್ಚು ಶ್ರೀಮಂತ ಸಂಸ್ಥೆ ಎನಿಸಿದ್ದು, ಆಟಗಾರರಿಗೆ ವಿಮಾನ ಸೌಲಭ್ಯ ಕಲ್ಪಿಸುವುದರಿಂದ ಯಾವುದೆ ಸಮಸ್ಯೆಯಾಗುವುದಿಲ್ಲ. ಜತೆಗೆ, ಈ ಸೌಲಭ್ಯ ಒದಗಿಸುವುದರಿಂದ ಕೆಲವು ಮಂದಿಗೆ ಉದ್ಯೋಗಾವಕಾಶ ನೀಡಿದಂತಾಗುತ್ತದೆ. ಆಟಗಾರರು ವಿದೇಶಗಳಲ್ಲಿ ವಿಶ್ರಾಂತಿ ಪಡೆಯಲು ಸ್ವಂತ ಹೋಟೆಲ್ ಮತ್ತು ಅತಿಥಿಗೃಹಗಳನ್ನು ಸ್ಥಾಪಿಸುವುದರಿಂದ ಪ್ರತಿ ಬಾರಿ ಹೋಟೆಲ್ ಶುಲ್ಕ ಪಾವತಿಸುವುದು ತಪ್ಪುತ್ತದೆ ಎಂದಿದ್ದಾರೆ.
ಅಮೆರಿಕದ ಕೆಲವು ಗಾಲ್ಫ್ ಆಟಗಾರರು ಸ್ವಂತ ವಿಮಾನವನ್ನು ಹೊಂದಿದ್ದಾರೆ. ಆದರೆ, ನಮ್ಮ ಆಟಗಾರರು ಏಕೆ ಸ್ವಂತ ವಿಮಾನವನ್ನು ಹೊಂದಿಲ್ಲ ಎನ್ನುವುದು ತಿಳಿದಿಲ್ಲ ಎಂದಿದ್ದಾರೆ. ಕಪಿಲ್ ದೇವ್ ತಮ್ಮ ಯೋಜನೆಗಳ ಕುರಿತು ಮೂರು ವರ್ಷಗಳ ಹಿಂದಯೇ ಬಿಸಿಸಿಐ ಗಮನಕ್ಕೆ ತಂದಿದ್ದರು.
ಸದ್ಯ ಭಾರತ ತಂಡ ಸೆ.17ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ–20 ಸರಣಿಯನ್ನು ಆಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.