ನವದೆಹಲಿ (ಪಿಟಿಐ): ‘ಬಿ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತಮಿಳ್ ತಲೈವಾಸ್ ತಂಡ ಭಾನುವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಪ್ರಬಲ ಬೆಂಗಾಲ್ ವಾರಿಯರ್ಸ್ಗೆ ಆಘಾತ ನೀಡುವ ಮೂಲಕ ರೋಚಕ ಗೆಲುವು ದಾಖಲಿಸಿದೆ.
ಪಂದ್ಯದ ಅಂತಿಮ ಹಂತದವರೆಗೂ ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ತಲೈವಾಸ್ ಕೇವಲ ಒಂದು ಪಾಯಿಂಟ್ ಅಂತರದಲ್ಲಿ ಜಯಗಳಿಸಿದೆ. 33–32 ಪಾಯಿಂಟ್ಸ್ಗಳಲ್ಲಿ ತಲೈವಾಸ್ ಗೆಲುವು ಒಲಿಸಿಕೊಂಡಿತು.
ಬೆಂಗಾಲ್ ವಾರಿಯರ್ಸ್ ಇದೇ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಅಜಯ್ ಠಾಕೂರ್ ಹಾಗೂ ಸಿ. ಅರುಣ್ ತಲಾ ಎಂಟು ಪಾಯಿಂಟ್ಸ್ಗಳಿಂದ ತಲೈವಾಸ್ ತಂಡದ ಗೆಲುವಿನ ರೂವಾರಿಗಳು ಎನಿಸಿದರು. ಅಜಯ್ ಏಳು ರೇಂಡಿಂಗ್ ಪಾಯಿಂಟ್ಸ್ಗಳನ್ನು ಪಡೆದುಕೊಂಡರೆ, ಒಂದು ಬೋನಸ್ ಪಾಯಿಂಟ್ನಿಂದ ಮಿಂಚಿದರು. ಅರುಣ್ ಎಲ್ಲಾ ಪಾಯಿಂಟ್ಸ್ಗಳನ್ನೂ ಟ್ಯಾಕಲ್ನಲ್ಲಿಯೇ ಪಡೆದುಕೊಂಡಿರುವುದು ವಿಶೇಷ. ದರ್ಶನ್ ಮೂರು ಪಾಯಿಂಟ್ಸ್ಗಳನ್ನು ತಂದುಕೊಟ್ಟರು.
ವಾರಿಯರ್ಸ್ ತಂಡ ಪಂದ್ಯದ ಮೊದಲರ್ಧದಲ್ಲಿಯೇ 15–18ರಲ್ಲಿ ಹಿಂದಿತ್ತು. ಆದರೆ ಉತ್ತರಾರ್ಧದಲ್ಲಿ ಈ ತಂಡ ಉತ್ತಮ ಪೈಪೋಟಿ ನಡೆಸಿತು. ಮನಿಂದರ್ ಸಿಂಗ್ 13 ಪಾಯಿಂಟ್ಸ್ಗಳಿಂದ ಮಿಂಚು ಹರಿಸಿದರು. ಹತ್ತು ರೇಡಿಂಗ್ ಪಾಯಿಂಟ್ಸ್ಗಳು ಹಾಗೂ ಮೂರು ಬೋನಸ್ ಪಾಯಿಂಟ್ಸ್ಗಳನ್ನು ಅವರು ತಮ್ಮದಾಗಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.