ನವದೆಹಲಿ: ಮುಂದಿನ ತಿಂಗಳ ಒಂಬತ್ತರಂದು ನಡೆಯಲಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಸಾಮಾನ್ಯ ಸಭೆಯಲ್ಲಿ ರಾಷ್ಟ್ರೀಯ ಉದ್ದೀಪನ ಮದ್ದು ನಿಷೇಧ ಘಟಕದ (ನಾಡಾ) ವಿಷಯ ಚರ್ಚೆಗೆ ಎತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರ ಜೊತೆ ಬುಧವಾರ ಮಾತುಕತೆ ನಡೆಸಿದ ಬಿಸಿಸಿಐ ಅಧಿಕಾರಿಗಳು ನಂತರ ಈ ವಿಷಯವನ್ನು ತಿಳಿಸಿದರು. ಐಸಿಸಿ ಆಯೋಜಿಸುವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಡುವುದರ ಬಗ್ಗೆಯೂ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಭಾರತದ ಕ್ರಿಕೆಟ್ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲು ನಾಡಾ ಉದ್ದೇಶಿಸಿದೆ. ಆದರೆ ಈ ಪ್ರಸ್ತಾಪವನ್ನು ಬಿಸಿಸಿಐ ವಿರೋಧಿಸಿದೆ. ಅಂತರರಾಷ್ಟ್ರೀಯ ಉದ್ದೀಪನ ಮದ್ದು ನಿಷೇಧ ಘಟಕದ (ವಾಡಾ) ವ್ಯಾಪ್ತಿಗೆ ಬಿಸಿಸಿಐ ಬರುವುದಿಲ್ಲ. ಆದ್ದರಿಂದ ನಾಡಾದ ಪರೀಕ್ಷೆಗೆ ಒಳಪಡುವ ಅಗತ್ಯ ಕ್ರಿಕೆಟ್ ಆಟಗಾರರಿಗೆ ಇಲ್ಲ ಎಂದು ಬಿಸಿಸಿಐ ವಾದಿಸಿದೆ.
ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಜೊಹ್ರಿ ಮತ್ತು ಪ್ರಧಾನ ವ್ಯವಸ್ಥಾಪಕ ಪ್ರೊ. ರತ್ನಾಕರ ಶೆಟ್ಟಿ ಅವರು ಸಚಿವರನ್ನು ಭೇಟಿ ಮಾಡಿ 45 ನಿಮಿಷಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.