ADVERTISEMENT

ವಿಶ್ರಾಂತಿಗೆ ಆಸ್ಪದವಿಲ್ಲದ ವೇಳಾಪಟ್ಟಿ: ಕೊಹ್ಲಿ ಕಿಡಿ

ಪಿಟಿಐ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ನಾಗಪುರ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಎಡೆಬಿಡದ ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಕ್ಷಿಣ ಆಫ್ರಿಕಾ ಎದುರಿನ ಮಹತ್ವದ ಸರಣಿಗೆ ಸಿದ್ದಗೊಳ್ಳಲು ಸಮಯ ಇಲ್ಲ. ಶ್ರೀಲಂಕಾ ವಿರುದ್ಧ ಮೂರು ಟೆಸ್ಟ್, ಮೂರು ಏಕದಿನ ಹಾಗೂ ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಿದ ಎರಡು ದಿನಗಳ ನಂತರ ದಕ್ಷಿಣ ಆಫ್ರಿಕಾಗೆ ಪ್ರವಾಸ  ಮಾಡಬೇಕು. ಸರಣಿಗಳ ನಡುವೆ ಒಂದು ತಿಂಗಳಾದರೂ ಸಮಯ ಇರಬೇಕು’ ಎಂದರು.

ಡಿಸೆಂಬರ್‌ 24ರಂದು ಭಾರತ ತಂಡ ಶ್ರೀಲಂಕಾ ಎದುರು ಅಂತಿಮ ಟಿ–20 ಪಂದ್ಯ ಆಡಲಿದೆ. ಡಿ.27ರಂದು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದೆ. 30ರಂದು ಅಭ್ಯಾಸ ಪಂದ್ಯ ನಡೆಯಲಿದೆ. ಜನವರಿ 5ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.

ADVERTISEMENT

‘ಬೇರೆ ದೇಶದ ಅಂಗಳದಲ್ಲಿ ಆಡಬೇಕಾದರೆ ಸಾಕಷ್ಟು ಪೂರ್ವಸಿದ್ದತೆ ನಡೆಸಬೇಕು. ದಕ್ಷಿಣ ಆಫ್ರಿಕಾದಂತಹ ಉತ್ತಮ ತಂಡದ ಎದುರು ಕಠಿಣ ತಾಲೀಮು ನಡೆಸಬೇಕು. ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಹೆಚ್ಚು ಕಾಲಾವಕಾಶ ಸಿಗದಿದ್ದರೆ ಆಟಗಾರರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪಣಕ್ಕೊಡ್ಡಲು ಸಾಧ್ಯವಾಗುವುದಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರು ಕಳೆದ  ಒಂದು ವರ್ಷದಿಂದ ಸತತವಾಗಿ ಸರಣಿಗಳಲ್ಲಿ ಆಡುತ್ತಿದ್ದಾರೆ. ತಮ್ಮ ವಿಶ್ರಾಂತಿಯ ಕುರಿತೂ ಈಚೆಗೆ ಅವರು ಮಾತನಾಡಿದ್ದರು. ‘ನಾನೂ ಮನುಷ್ಯ. ರೋಬೊ ಅಲ್ಲ’ ಎಂದಿದ್ದರು. ತಮಗೆ ಬೇಕಾದಾಗ ವಿಶ್ರಾಂತಿ ಪಡೆಯುವುದಾಗಿಯೂ ತಿಳಿಸಿದ್ದರು.

ಕೊಹ್ಲಿ ಹೇಳಿಕೆಗೆ ಖನ್ನಾ ಪ್ರತಿಕ್ರಿಯೆ
‘ಕೊಹ್ಲಿ ಅವರ ಅಭಿಪ್ರಾಯವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಲಿದೆ. ಭಾರತ ತಂಡ ಉತ್ತಮವಾಗಿ ಆಡುತ್ತಿದೆ. ಮುಂದಿನ ದಿನಗಳಲ್ಲೂ ತಂಡದ ಬೆಳವಣಿಗೆಯ ಬಗ್ಗೆ  ಯೋಜನೆಗಳನ್ನು ರೂಪಿಸಬೇಕಿದೆ. ಇದಕ್ಕಾಗಿ ಆಟಗಾರರಿಗೆ ಸಿದ್ದಗೊಳ್ಳಲು ಸಮಯ ನೀಡಬೇಕು ’ ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ ಖನ್ನಾ ಹೇಳಿದ್ದಾರೆ.‌

‘ಮುಂಬರುವ ತವರಿನ ಸರಣಿಗಳ ನಡುವೆ ಹೆಚ್ಚು ಅಂತರ ಇರುವಂತೆ ಬಿಸಿಸಿಐ ಎಚ್ಚರಿಕೆ ವಹಿಸಲಿದೆ. ಸತತ ಮೂರು ಸರಣಿಗಳನ್ನು ಆಡಿಸುವುದರಿಂದ ಆಟಗಾರರ ಮೇಲೆ ಒತ್ತಡ ಹೆಚ್ಚುತ್ತದೆ ಎಂಬುದನ್ನು ನಾವು ಮೊದಲೇ ಅರಿತುಕೊಳ್ಳಬೇಕಿತ್ತು’ ಎಂದು ಖನ್ನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.