ಕೇಪ್ಟೌನ್, ದಕ್ಷಿಣ ಆಫ್ರಿಕಾ: ಹಿಂಗಾಲಿನ ಗಾಯಕ್ಕೆ ಒಳಗಾಗಿದ್ದ ಶಿಖರ್ ಧವನ್ ಗುಣಮುಖರಾಗಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ.
ಆದರೆ ರವೀಂದ್ರ ಜಡೇಜ ಅನಾರೋಗ್ಯಕ್ಕೆ ತುತ್ತಾಗಿರುವುದು ಭಾರತದ ಪಾಳಯದಲ್ಲಿ ಆತಂಕ ಮೂಡಿಸಿದೆ. ಧವನ್ ಗುಣಮುಖರಾಗಿರುವುದ ರಿಂದ ಮುರಳಿ ವಿಜಯ್ ಅವರ ಜೊತೆ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಈ ವಿಷಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ ಖಚಿತಪಡಿಸಿದೆ.
‘ಎರಡು ದಿನಗಳಿಂದ ಅನಾ ರೋಗ್ಯದಿಂದ ಬಳಲುತ್ತಿರುವ ಜಡೇಜ ಅವರಿಗೆ ಚಿಕಿತ್ಸೆ ಕೊಡಿಸಲಾಗಿದ್ದು ಸಂಪೂರ್ಣ ಗುಣಮುಖರಾದರೆ ಮಾತ್ರ ಕಣಕ್ಕೆ ಇಳಿಸಲಾಗುವುದು. ಬಿಸಿಸಿಐ ವೈದ್ಯಕೀಯ ತಂಡ ಅವರ ಆರೈಕೆ ಮಾಡುತ್ತಿದೆ. ಸ್ಥಳೀಯ ವೈದ್ಯರ ಜೊತೆಗೂ ಚಿಕಿತ್ಸೆಯ ಕುರಿತು ಚರ್ಚೆ ಮಾಡುತ್ತಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದರು.
ಪಂದ್ಯದಲ್ಲಿ ಮೂವರು ವೇಗಿಗಳು ಮತ್ತು ಒಬ್ಬರು ಸ್ಪಿನ್ ಬೌಲರ್ನನ್ನು ಆಡಿಸಲು ತಂಡ ನಿರ್ಧರಿಸಿದರೆ ಜಡೇಜ ಬದಲಿಗೆ ರವಿಚಂದ್ರನ್ ಅಶ್ವಿನ್ ಅವಕಾಶ ಪಡೆಯುವ ಸಾಧ್ಯತೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.