ಬೆಂಗಳೂರು: ‘ತಮ್ಮೊಳಗಿನ ಪ್ರತಿಭೆಯನ್ನು ಸಾಬೀತು ಮಾಡಲು ಯುವ ಆಟಗಾರರಿಗೆ ಸಂತೋಷ್ ಟ್ರೋಫಿ ಫುಟ್ಬಾಲ್ ಚಾಂಪಿಯನ್ಷಿಪ್ ಉತ್ತಮ ವೇದಿಕೆ’ ಎಂದು ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಹೇಳಿದರು.
ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಬಿಎಫ್ಸಿ ಅಂತರ ಶಾಲಾ ಫುಟ್ಬಾಲ್ ಟೂರ್ನಿಯ ಲಾಂಛನ ಮತ್ತು ಪೋಷಾಕು ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೂರನೇ ಆವೃತ್ತಿಯ ಅಂತರ ಶಾಲಾ ಟೂರ್ನಿ ಜನವರಿ 23ರಿಂದ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ಜರುಗಲಿದೆ. 10,12 ಮತ್ತು 14 ವರ್ಷದೊಳಗಿನವರ ವಿಭಾಗದಲ್ಲಿ ಪಂದ್ಯಗಳು ನಡೆಯಲಿದ್ದು 60ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ.
‘ಈ ಹಿಂದೆ ನಾನು ಸಂತೋಷ್ ಟ್ರೋಫಿಯಲ್ಲಿ ಆಡಿದ್ದೇನೆ. ದೆಹಲಿ ತಂಡವನ್ನು ಮುನ್ನಡೆಸಿದ್ದೇನೆ. ಈ ಟೂರ್ನಿಯಲ್ಲಿ ತೋರುತ್ತಿದ್ದ ಸಾಮರ್ಥ್ಯದ ಆಧಾರದಲ್ಲೇ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತಿತ್ತು. ಆಯ್ಕೆ ಸಮಿತಿ ಸದಸ್ಯರು ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ನೋಡುತ್ತಿದ್ದರು. ಆಗ ಪ್ರಮುಖ ಆಟಗಾರರು ಇದರಲ್ಲಿ ಆಡುತ್ತಿದ್ದರು. ಈಗ ಐಎಸ್ಎಲ್, ಐ ಲೀಗ್ ಸೇರಿದಂತೆ ಸಾಕಷ್ಟು ಪಂದ್ಯಗಳು ನಡೆಯುತ್ತಿರುವ ಕಾರಣ ಹಲವರು ಸಂತೋಷ್ ಟ್ರೋಫಿಯಿಂದ ಹಿಂದೆ ಸರಿಯುತ್ತಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.